ಸಂಬಲ್ಪುರ್: ಅನ್ನ ಮಾಡಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಕೊಲೆಗೈದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಒಡಿಶಾದ ಸಂಬಲ್ಪುರ ಜಿಲ್ಲೆಯ ಜಮನಕಿರಾ ಪೊಲೀಸ್ ಠಾಣಾ ವ್ಯಾಪ್ತಿಯ ನುವಾಧಿ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ಮೃತ ಮಹಿಳೆಯನ್ನು 35 ವರ್ಷದ ಪುಷ್ಪಾ ಧರುವಾ ಎಂದು ಗುರುತಿಸಲಾಗಿದ್ದು, ಆಕೆಯ ಪತಿ 40 ವರ್ಷದ ಸನಾತನ್ ಧಾರುವಾನನ್ನು ಬಂಧಿಸಲಾಗಿದೆ. ಸನಾತನ್ ಮತ್ತು ಪುಷ್ಪಾ ದಂಪತಿಗಳಿಗೆ ಒಬ್ಬ ಮಗಳು ಮತ್ತು ಒಬ್ಬ ಮಗನಿದ್ದು, ಮಗಳು ಕುಚಿಂದಾದಲ್ಲಿ ಮನೆಗೆಲಸ ಮಾಡುತ್ತಿದ್ದಳು.
ಇದನ್ನೂ ಓದಿ: ಸೇತುವೆಗೆ ಬಿದ್ದ ಬಸ್; 14 ಮಂದಿ ಪ್ರಯಾಣಿಕರು ಮೃತ್ಯು, ಹಲವು ಜನ ಗಂಭೀರ
ಘಟನೆ ನಡೆದ ದಿನವಾದ ಭಾನುವಾರದಂದು ದಂಪತಿಗಳ ಮಗ ರಾತ್ರಿ ಮಲಗಲು ತನ್ನ ಸ್ನೇಹಿತನ ಮನೆಗೆ ಹೋಗಿದ್ದ. ಮರುದಿನ ಬೆಳಿಗ್ಗೆ ಮನೆಗೆ ಹಿಂತಿರುಗಿದ ಬಳಿಕ ತಾಯಿ ಶವವಾಗಿ ಬಿದ್ದಿರುವುದು ಕಂಡು ಗಾಬರಿಯಾದ ಮಗ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತನಿಖೆ ಆರಂಭಿಸಿದ ಪೊಲೀಸರು ಗಂಡನ ಮೇಲೆ ಸಂದೇಹಗೊಂಡು ವಶಕ್ಕೆ ಪಡೆದಿದ್ದಾರೆ.
ತನಿಖೆ ವೇಳೆ ಸತ್ಯವನ್ನು ಒಪ್ಪಿಕೊಂಡಿರುವ ಸನಾತನ್, ತಾನು ಎಂದಿನಂತೆ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗ, ಪುಷ್ಪಾ ಅನ್ನವನ್ನು ಮಾಡಿರಲಿಲ್ಲ. ಇದರಿಂದ ಇಬ್ಬರ ನಡುವೆ ವಾಗ್ವಾದ ಶುರುವಾಗಿ ಸಿಟ್ಟಿಗೆದ್ದು ಹೆಂಡತಿಯ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.(ಏಜೆನ್ಸೀಸ್)