ಅಮರಾವತಿ: ಕರೊನಾ ಬಗ್ಗೆ ನಿರ್ಲಕ್ಷ್ಯ ಬೇಡ. ಯಾವುದೇ ಸಣ್ಣ ರೋಗ ಲಕ್ಷಣವಿದ್ದರೂ ಸೂಕ್ತ ಮುನ್ನೆಚ್ಚರಿಕೆ ವಹಿಸಿ, ಚಿಕಿತ್ಸೆ ಪಡೆಯಿರಿ ಎಂದು ವೈದ್ಯಕೀಯ ಸಿಬ್ಬಂದಿ ಹೇಳುತ್ತಲೇ ಬಂದಿದ್ದಾರೆ. ಆದರೆ ಅದನ್ನಾವುದನ್ನೂ ಲೆಕ್ಕಿಸದ ವ್ಯಕ್ತಿಯೊಬ್ಬ ಕಚೇರಿಯ ಕುರ್ಚಿಯ ಮೇಲೇ ಪ್ರಾಣ ಬಿಟ್ಟಿರುವ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ.
ಕಾಕಿನಾಡ ಜಿಲ್ಲೆಯ ಗಂಡೇಪಲ್ಲಿ ತಾಲೂಕಿನ ಮಲ್ಲೆಪಲ್ಲೆ ಗ್ರಾಮ ಪಂಚಾಯತಿಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಪಂಚಾಯತಿ ಕಾರ್ಯದರ್ಶಿ ಜಯಶಂಕರ್ ನಾರಾಯಣ್ಗೆ ಕಳೆದ ಕೆಲ ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಇದೊಂದು ಸಾಮಾನ್ಯ ಜ್ವರ ಎಂದು ಹೆಚ್ಚು ಯೋಚಿಸದ ಜಯಶಂಕರ್ ಕಚೇರಿಗೆ ರಜೆ ಮಾಡದೆಯೇ ಕೆಲಸಕ್ಕೆ ಹಾಜರಾಗುತ್ತಿದ್ದರು.
ಶುಕ್ರವಾರ ಕೂಡ ಅದೇ ರೀತಿ ಕೆಲಸಕ್ಕೆ ಬಂದಿದ್ದಾರೆ. ಬಂದು ತಮ್ಮ ಕುರ್ಚಿಯ ಮೇಲೆ ಕುಳಿತು ಕೆಲಸ ಆರಂಭಿಸಿದ್ದಾರೆ. ಆದರೆ ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರು ಕಂಡುಬಂದಿದೆ. ಒಂದೇ ಕ್ಷಣಕ್ಕೆ ಉಸಿರಾಟ ತೊಂದರೆ ಕಂಡುಬಂದಿದ್ದು, ಅವರು ಕುಳಿತ ಜಾಗದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಇದನ್ನು ಕಂಡ ಸಹೋದ್ಯೋಗಿಗಳಿಗೆ ಕರೊನಾದ ಅನುಮಾನ ಬಂದು ಜಯಶಂಕರ್ನನ್ನು ಮುಟ್ಟಲೂ ಹಿಂದೇಟು ಹಾಕಿದ್ದಾರೆ. ಅದಾದ ಮೇಲೆ ಹತ್ತಿರದ ಆಸ್ಪತ್ರೆಗೆ ಕರೆ ಮಾಡಿ ವಿಚಾರ ತಿಳಿಸಲಾಗಿದೆ. ಸ್ಥಳಕ್ಕೆ ಬಂದ ವೈದ್ಯಕೀಯ ಸಿಬ್ಬಂದಿ ಜಯಶಂಕರ್ನ ಕರೊನಾ ಪರೀಕ್ಷೆ ಮಾಡಿದ್ದಾರೆ. ಅದರಲ್ಲಿ ಅವರಿಗೆ ಕರೊನಾ ಇರುವುದು ದೃಢವಾಗಿದೆ.
ಲಸಿಕೆಗೆ ಹೆಚ್ಚು ಹಣ ಕೇಳುವ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಬಿ.ಎಸ್.ಯಡಿಯೂರಪ್ಪ