ಚಂಡೀಗಢ: ರಸ್ತೆ ಗುಂಡಿಯ ಕಾರಣಕ್ಕೆ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ನಗರ ಪ್ರದೇಶಗಳಲ್ಲೇ ರಸ್ತೆ ಗುಂಡಿಗಳ ಅವಾಂತರ ಹೆಚ್ಚು. ಆದರೆ, ಇದಕ್ಕೆ ತದ್ವಿರುದ್ಧವಾದ ಘಟನೆ ಪಂಜಾಬ್ನ ಪಟಿಯಾಲಾದಲ್ಲಿ ನಡೆದಿದೆ. ರಸ್ತೆ ಗುಂಡಿಯೇ ವ್ಯಕ್ತಿಯೊಬ್ಬನ ಜೀವ ಉಳಿಸಿದೆ. ಕೇಳಲು ವಿಚಿತ್ರ ಎನಿಸಿದರೂ ಇದು ಸತ್ಯ. ಇಲ್ಲಿದೆ ಕಂಪ್ಲೀಟ್ ಮಾಹಿತಿ.
ಅನಾರೋಗ್ಯ ಹಿನ್ನೆಲೆಯಲ್ಲಿ 80 ವರ್ಷದ ದರ್ಶನ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದರು. ಬಳಿಕ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆಂದು ಮೃತದೇಹವನ್ನು ಆಂಬ್ಯುಲೆನ್ಸ್ನಲ್ಲಿ ತೆಗೆದುಕೊಂಡು ಹೋಗುವಾಗ ವಾಹನ ರಸ್ತೆಗುಂಡಿಗೆ ಬಿದ್ದಿದೆ. ಇದರ ಪರಿಣಾಮ ವಾಹನದ ಒಳಗಿದ್ದ ಪ್ರಯಾಣಿಕರು ಮೇಲಕ್ಕೆ ಎಗರಿ ಕೆಳಗೆ ಬಿದ್ದರು. ಇದರ ಬೆನ್ನಲ್ಲೇ ಸಂಬಂಧಿಕರೊಬ್ಬರು ಮೃತ ದರ್ಶನ್ ಸಿಂಗ್ ಕೈಗಳು ಚಲನೆಯಲ್ಲಿರುವುದನ್ನು ಗಮನಿಸಿ, ತಕ್ಷಣ ಆಸ್ಪತ್ರೆಗೆ ಕರೆದೊಯ್ದರು.
ಪಟಿಯಾಲದಿಂದ ಕರ್ನಲ್ ಬಳಿ ಇರುವ ಮನೆಗೆ ಮೃತದೇಹವನ್ನು ಕೊಂಡೊಯ್ಯುವಾಗ ಈ ಪವಾಡ ನಡೆದಿದೆ. ಸಾವಿನ ಸುದ್ದಿ ತಿಳಿದು ಕುಟುಂಬಸ್ಥರು ಕಟ್ಟಿಗೆಗಳನ್ನು ಜೋಡಿಸಿ, ಅಂತಿಮ ಸಂಸ್ಕಾರಕ್ಕೂ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ದೇವರ ಲೆಕ್ಕಾಚಾರವೇ ಬೇರೆ ಇತ್ತು ಎಂಬಂತೆ ದರ್ಶನ್ ಸಾವಿನಿಂದ ಮರಳಿದ್ದಾರೆ. ದರ್ಶನ್ ಕೈಗಳು ಆಡುವುದನ್ನು ನೋಡಿ ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಕೊಂಡೊಯ್ಯಲು ಆಂಬ್ಯುಲೆನ್ಸ್ ಚಾಲಕನಿಗೆ ತಿಳಿಸಿದರು.
ಆಸ್ಪತ್ರೆಗೆ ತೆರಳಿದ ಬೆನ್ನಲ್ಲೇ ಪರೀಕ್ಷಿಸಿದ ವೈದ್ಯರು ದರ್ಶನ್ ಜೀವಂತವಾಗಿದ್ದಾರೆ ಆದರೆ, ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಕರ್ನಲ್ನಲ್ಲಿರುವ ಆಸ್ಪತ್ರೆಯಲ್ಲಿ ದರ್ಶನ್ಗೆ ಚಿಕಿತ್ಸೆ ಮುಂದುವರಿದಿದೆ. ಮತ್ತೆ ಚೇತರಿಸಿಕೊಳ್ಳಬಹುದು ಎಂದು ಕುಟುಂಬಸ್ಥರು ಭರವಸೆ ಇಟ್ಟುಕೊಂಡಿದ್ದಾರೆ.
ಅಂದಹಾಗೆ ದರ್ಶನ್ ಸಿಂಗ್ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಮತ್ತು ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ನಾಲ್ಕು ದಿನಗಳ ಕಾಲ ವೆಂಟಿಲೇಟರ್ನಲ್ಲಿದ್ದರು. ಅವರ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರ ಅವರು ಸಾವಿಗೀಡಾಗಿದ್ದಾರೆ ಎಂದು ಕುಟುಂಬಕ್ಕೆ ವೈದ್ಯರು ತಿಳಿಸಿದ್ದರು. ಆದರೆ, ರಸ್ತೆ ಗುಂಡಿಗೆ ವಾಹನ ಬಿದ್ದ ಬಳಿಕ ದರ್ಶನ್ಗೆ ಮರುಜೀವ ಬಂದಿದ್ದು, ಪಾಲಕರು ಸಂತಸಗೊಂಡಿದ್ದಾರೆ. ಸ್ಥಳೀಯ ಜನರು ನಿಜಕ್ಕೂ ಇದು ಪವಾಡವೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)
ಇಲ್ಲಿವರೆಗೂ ನಯನತಾರಾ ಬಾಳಲ್ಲಿ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದೆಲ್ಲ ನಡೆದಿದೆ! ಇದು ಕೂಡ ನಡೆಯಲಿದೆಯಂತೆ…
ಮೋದಿ ಆಕ್ಷನ್ ಪ್ಲ್ಯಾನ್ ಅವರ ಸಹೋದ್ಯೋಗಿಗಳಿಗೂ ಗೊತ್ತಾಗುವುದಿಲ್ಲ: ದೇವೇಗೌಡ