ಶ್ರೀನಗರ: ಕಳೆದ ವರ್ಷ ಫೆ. 14ರಂದು 40 ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದುಕೊಂಡ ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಶುಕ್ರವಾರ ಬಂಧಿಸಿದೆ.
ಇಬ್ಬರಲ್ಲಿ ಓರ್ವ ಆರೋಪಿ ಕೇಂದ್ರೀಯ ಸಶಕ್ತ ಪೊಲೀಸ್ ಪಡೆಯ ಬೆಂಗಾವಲು ವಾಹನಗಳ ಮೇಲೆ ದಾಳಿ ಮಾಡಲು ಐಇಡಿ ಬಾಂಬ್ ತಯಾರಿಕೆಗಾಗಿ ಆನ್ಲೈನ್ ಶಾಪಿಂಗ್ನಿಂದ ರಾಸಾಯನಿಕಗಳನ್ನು ಕೊಂಡುತಂದಿದ್ದ ಎಂಬ ಭಯಾನಕ ಮಾಹಿತಿ ಹೊರಬಿದ್ದಿದೆ.
ಶ್ರೀನಗರದ ವೈಜ್ ಅಲ್ ಇಸ್ಲಾಂ(19) ಮತ್ತು ಪುಲ್ವಾಮದ ಮೊಹಮ್ಮದ್ ಅಬ್ಬಾಸ್ ರಾಥರ್(32) ಬಂಧಿತ ಆರೋಪಿಗಳು. ಪುಲ್ವಾಮ ಪ್ರಕರಣದಲ್ಲಿ ಈವರೆಗೆ ಒಟ್ಟು ಐವರು ಆರೋಪಿಗಳನ್ನು ಎನ್ಐಎ ಬಂಧಿಸಿದೆ.
ಆರಂಭಿಕ ತನಿಖೆಯಲ್ಲಿ ಆರೋಪಿ ಇಸ್ಲಾಂ ಸ್ಪೋಟಕ ಮಾಹಿತಿ ಹೊರಗೆಡವಿದ್ದು, ಐಇಡಿ ಬಾಂಬ್ ತಯಾರಿಕೆಗೆ ಅಮೇಜಾನ್ ಆನ್ಲೈನ್ ಶಾಪಿಂಗ್ನಿಂದ ರಾಸಾಯನಿಕಗಳು, ಬ್ಯಾಟರಿಗಳು ಮತ್ತು ಇತರೆ ಅವಶ್ಯಕ ವಸ್ತುಗಳನ್ನು ಕೊಂಡುಕೊಂಡಿದ್ದಾಗಿ ಹೇಳಿದ್ದಾನೆ. ಎಲ್ಲವನ್ನು ಪಾಕಿಸ್ತಾನದ ಜೈಷ್ ಎ ಮೊಹಮ್ಮದ್(ಜಿಇಎಂ) ಉಗ್ರ ಸಂಘಟನೆಯ ನಿರ್ದೇಶನದಂತೆಯೇ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸಂಚಿನ ಭಾಗವಾಗಿ ವೈಯಕ್ತಿಕವಾಗಿಯೇ ಬಾಂಬ್ ತಯಾರಿಕೆಯ ಎಲ್ಲ ವಸ್ತಗಳನ್ನು ಕೊಂಡು ಜೆಇಎಂ ಉಗ್ರರಿಗೆ ಆರೋಪಿ ಇಸ್ಲಾಂ ನೀಡಿದ್ದಾನೆ.
ಮತ್ತೋರ್ವ ಆರೋಪಿ ರಾಥರ್, ಜೆಇಎಂ ಸಂಘಟನೆಯ ಹಳೆಯ ಭೂಗತ ಕೆಲಸಗಾರ. ಜೈಷ್ ಉಗ್ರರು ಹಾಗೂ ಐಇಡಿ ಪರಿಣಿತ ಮೊಹದ್ ಉಮರ್ 2018ರ ಏಪ್ರಿಲ್-ಮೇನಲ್ಲಿ ಕಾಶ್ಮೀರಕ್ಕೆ ಬಂದಿದ್ದಾಗ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಹೀಗೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಷ್ಟೇ ಅಲ್ಲದೆ, ಜೈಷ್ ಇತರೆ ಉಗ್ರರಾದ ಆತ್ಮಾಹುತಿ ಬಾಂಬ್ ದಾಳಿಕೋರ ಆದಿಲ್ ಅಹ್ಮದ್ ದಾರ್, ಸಮೀರ್ ಅಹ್ಮದ್ ದಾರ್ ಮತ್ತು ಕಮ್ರಾನ್ ಉಗ್ರರಿಗೆ ಪುಲ್ವಾಮ ದಾಳಿಗೂ ಮುನ್ನ ಆಶ್ರಯ ನೀಡಿದ್ದ ಎಂದು ಹೇಳಿದರು.
ಆರೋಪಿಗಳಾದ ಇಸ್ಲಾಂ ಮತ್ತು ರಾಥರ್ನನ್ನು ಶನಿವಾರ ಜಮ್ಮುವಿನಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)