ಹಾಸನ: ಈ ಬಾರಿಯ ವಿಧಾನಸಭಾ ಚುನಾವಣೆ ರಾಜ್ಯಕ್ಕೆ ಅತ್ಯಂತ ಮಹತ್ತರವಾದ ಚುನಾವಣೆ. ಏನು ಅಭಿವೃದ್ಧಿ ಆಗಬೇಕಿತ್ತೋ, ಅದು ನಿಂತು ಹೋಗಿದೆ. ಬಿಜೆಪಿ ಸರ್ಕಾರ ಒಳ್ಳೆಯ ಆಡಳಿತವನ್ನು ನೀಡಬೇಕಾಗಿತ್ತು. ಆದರೆ ಈ ಸರ್ಕಾರ ಮಾತ್ರ ಭಷ್ಟಾಚಾರಕ್ಕೆ ಎತ್ತಿದ ಕೈ. ಅನೇಕ ಲೋಪದೋಷಗಳಿಂದ ಈ ಸರ್ಕಾರ ಕೂಡಿದೆ ಎಂದು ಹೇಳುವ ಮೂಲಕ ಬೊಮ್ಮಾಯಿ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಸಕಲೇಶಪುರ ತಾಲ್ಲೂಕಿನ ಬಾಳುಪೇಟೆಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಖರ್ಗೆ ಮಾತನಾಡುತ್ತಾ, ಜನರಿಗೆ ಸವಲತ್ತುಗಳನ್ನು ನೀಡಲು ಬಿಜೆಪಿ ಸರ್ಕಾರ, ಮುಖಂಡರು, ಶಾಸಕರು 40% ಕಮಿಷನ್ ತೆಗೆದುಕೊಳ್ಳುತ್ತಾರೆ. ಕಂಟ್ರಾಕ್ಟರ್ಗಳು, ಮಠ-ಮಂದಿರಗಳ ಅನುದಾನ ಪಡೆಯಬೇಕಿದ್ದರೆ 40% ಕೊಡಬೇಕಿದೆ. ವಾಸ್ತವ ಹೀಗಿರಬೇಕಾದರೆ ಕೆಲಸದ ಗುಣಮಟ್ಟ ಹೇಗಿರಬಹುದು ಎಂದು ಟೀಕಿಸಿದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಲಂಚಕೋರ ಸರ್ಕಾರವನ್ನು ತೆಗೆದು ಹಾಕಿ ಓಡಿಸಬೇಕಿದೆ. ಇಂತಹ ಸರ್ಕಾರ ಎಲ್ಲಿಯವರೆಗೂ ಇರುತ್ತೋ ರಾಜ್ಯದ ಹೆಸರು ಹಾಳಾಗುತ್ತದೆ. ಕೇಂದ್ರ ಸರ್ಕಾರ ಲಂಚಕ್ಕೆ ಪ್ರೋತ್ಸಾಹ ನೀಡುತ್ತಿದೆ. ನಾವು ಕೆಲಸ ಮಾಡಿ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಬಂದಿದ್ದೇವೆ. ಆದರೆ ಇವರು ಪ್ರಚಾರಕ್ಕಾಗಿ ಎಂಎಲ್ಎ, ಎಂಎಲ್ಸಿ ಇಲ್ಲದೇ ನೇರವಾಗಿ ಮೇಲೆ ಬಂದಿದ್ದಾರೆ. ಮೋದಿ 25 ವರ್ಷ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಿ ಆಡಳಿತ ನಡೆಸಿಯೂ, ಜನರ ಕಷ್ಟ ಗೊತ್ತಿಲ್ಲ ಖರ್ಗೆ ವಾಗ್ದಾಳಿ ನಡೆಸಿದರು.
ಐವತ್ತು, ಅರವತ್ತು ಕಾಂಗ್ರೆಸ್ ಆಡಳಿತ ನಡೆಸಿ, ದೇಶದ ಅಭಿವೃದ್ಧಿ ಮಾಡುವ ಕೆಲಸ ಮಾಡಿದೆ. ಒಂದು ಸೂಜಿ ಕೂಡ ತಯಾರು ಮಾಡುತ್ತಿರಲಿಲ್ಲ, ನಾವು ರಾಕೆಟ್ ಹಾರಿಸುವ ಕೆಲಸ ಮಾಡಿದ್ದೇವೆ. ಆಕಾಶದಲ್ಲಿ ಹದ್ದು ಹಾರುತ್ತಿದ್ದರೆ ಕೋಣ ಹಾರುತ್ತಿದೆ ಎಂದು ಅಮಿತ್, ನರೇಂದ್ರ ಮೋದಿ ಹೇಳುತ್ತಿದ್ದಾರೆ. ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಸಂವಿಧಾನ ಪ್ರಕಾರ ನಡೆಯುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.