ಮಳಖೇಡ: ಇಲ್ಲಿನ ಕಾಗಿಣಾ ನದಿಗೆ ಅಡ್ಡಲಾಗಿ ಹೊಸದಾಗಿ ೨೭.೯ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಂಗಳವಾರ ಕಾರಿನಿಂದ ಕೆಳಗಿಳಿಯದೆ ತರಾತುರಿಯಲ್ಲಿ ಪರಿಶೀಲಿಸಿ ಸಂಬಂಧಿತ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದೆ ಸಾಗಿದರು.
ಕಾಮಗಾರಿ ವಿಳಂಬವಾಗಿರುವುದಕ್ಕೆ ಡಿಸಿಗೆ ವಿವರಣೆ ನೀಡಿದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್ಡಿಸಿಎಲ್)ದ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ. ಪಾಟೀಲ್, ಇನ್ನೆರಡು ತಿಂಗಳಲ್ಲಿ ಕೆಲಸ ಪೂರ್ಣಗೊಳಿಸುವುದಾಗಿ ಹೇಳಿದರು.
ಇದಕ್ಕೂ ಮುನ್ನ ಕಾಮಗಾರಿ ಪರಿಶೀಲಿಸಿದ ಸಹಾಯಕ ಆಯುಕ್ತ ಆಶಪ್ಪ, ಸೇತುವೆ ಕೆಲಸ ವಿಳಂಬದಿAದಾಗಿ ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಅಪಘಾತಗಳು ಸಹ ಸಂಭವಿಸುತ್ತಿವೆ. ಆದಷ್ಟು ಬೇಗ ಕೆಲಸ ಮುಗಿಸಬೇಕು. ಹಳೆಯ ಸೇತುವೆ ಮೇಲೆ ಅಪಘಾತವಾಗಿ ಪ್ರಾಣ ಹಾನಿಯಾದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಬಳಿಕ ಡಿಸಿ ಮಳಖೇಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆ ಹಾಗೂ ಹೂಡಾ(ಕೆ) ಗ್ರಾಮದ ಹೊಲವೊಂದರಲ್ಲಿನ ಬೆಳೆ ಹಾನಿ ಪರಿಶೀಲಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಯ್ಯ ಪುರಾಣಿಕ, ತಹಸೀಲ್ದಾರ್ ಶ್ರೀಯಾಂಕ, ಕೆಆರ್ಡಿಸಿಎಲ್ ಎಇಇ ಜಗದೇವ ಮೂರ್ತಿ, ಕಂದಾಯ ಇಲಾಖೆ ಆರ್ಐ ರವಿಕುಮಾರ, ವಿಎ ಚಂದ್ರಕಾಂತ, ಸಂತೋಷ ರಾಠೋಡ್ ಇತರರಿದ್ದರು.