ನವದೆಹಲಿ: ರಾಷ್ಟ್ರಾದ್ಯಂತ ಕರೊನಾ ಸೋಂಕಿನ ರುದ್ರತಾಂಡವ ಮುಂದುವರಿದಿರುವಂತೆ ಕೇಂದ್ರ ಸರ್ಕಾರ ಆಗಸ್ಟ್ 15ರಿಂದ ಶಾಲೆ-ಕಾಲೇಜುಗಳ ಪುನರಾರಂಭಿಸಲು ಮುಂದಾಗುತ್ತಿದೆ. ಆದರೆ, ಇದಕ್ಕೆ ಪಾಲಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ದೆಹಲಿಯ ಸರ್ಕಾರಿ ಶಾಲಾ ಶಿಕ್ಷಕರ ಸಂಘ ಹಾಲಿ ಶೈಕ್ಷಣಿಕ ವರ್ಷವನ್ನು ಶೂನ್ಯ ಶೈಕ್ಷಣಿಕ ವರ್ಷ ಎಂದು ಘೋಷಿಸುವಂತೆ ಸರ್ಕಾರವನ್ನು ಆಗ್ರಹಿಸಿದೆ.
ದೆಹಲಿಯಲ್ಲಿ ದಿನೇದಿನೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೂನ್ಯ ಶೈಕ್ಷಣಿಕ ವರ್ಷ ಎಂದು ಘೋಷಿಸುವುದು ಒಳಿತು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್ವೀರ್ ಯಾದವ್ ಹೇಳಿದ್ದಾರೆ.
ದೆಹಲಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಸಹಸ್ರಾರು ಸಂಖ್ಯೆಯಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸರ್ಕಾರವೇ ಹೇಳುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಶಾಲೆ-ಕಾಲೇಜುಗಳನ್ನು ಪುನರಾರಂಭಿಸುವುದು ತುಂಬಾ ಅಪಾಯಕಾರಿ ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕರೊನಾ ಟೆಸ್ಟ್ ಮಾಡಿಸಿಕೊಂಡ ಕೇಜ್ರಿವಾಲ್: ವರದಿ ಬರುವವರೆಗೂ ಡವಡವ
ಇಸ್ರೇಲ್ ಸರ್ಕಾರ ಕೂಡ ಹೀಗೆಯೇ ಅವಸರಿಸಿ ಶಾಲೆ-ಕಾಲೇಜುಗಳನ್ನು ಪುನರಾರಂಭಿಸಿತು. ಆಗ ಅಲ್ಲಿ ಏನಾಯಿತು ಎಂಬುದನ್ನು ಯಾರೊಬ್ಬರೂ ಮರೆಯಬಾರದು. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸ್ವತಃ ಕರೊನಾ ಸೋಂಕಿಗೆ ತುತ್ತಾಗಿರುವ ಕುರುಹುಗಳು ಕಾಣಿಸುತ್ತಿವೆ. ಇಂಥ ಸ್ಥಿತಿಯಲ್ಲಿ ಶಾಲೆ-ಕಾಲೇಜುಗಳನ್ನು ಪುನರಾರಂಭಿಸಿದರೆ ಎಂಥ ಅನಾಹುತ ಆಗಬಹುದು ಎಂಬುದನ್ನು ನಾವು ಅರಿತುಕೊಳ್ಳಬೇಕು. ಆದ್ದರಿಂದ, ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಶೂನ್ಯ ಶೈಕ್ಷಣಿಕ ವರ್ಷ ಎಂದು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕೂ ಮುಖ್ಯವಾಗಿ 100ಕ್ಕೂ ಹೆಚ್ಚು ಶಿಕ್ಷಕರು ಕರೊನಾ ಸೋಂಕಿಗೆ ತುತ್ತಾಗಿದ್ದಾರೆ. ದೆಹಲಿಯ ನಾಲ್ಕು ಶಿಕ್ಷಕರು ಪಿಡುಗಿಗೆ ಬಲಿಯಾಗಿದ್ದಾರೆ. ಆದ್ದರಿಂದ, ಕರೊನಾ ಸೋಂಕು ಇಳಿಮುಖವಾಗುವವರೆಗೆ ಶಾಲೆ-ಕಾಲೇಜು ಪುನರಾರಂಭಿಸುವ ಬಗ್ಗೆ ಆಲೋಚಿಸಲೂ ಬಾರದು ಎಂದು ಹೇಳಿದ್ದಾರೆ.
ಇಲ್ನೋಡಿ, ಒಂದೇ ಕುಟುಂಬದ 15 ಜನರಿಗೂ ವಕ್ಕರಿಸಿದೆ ಕರೊನಾ ಹೆಮ್ಮಾರಿ!