ಚಿಕ್ಕಮಗಳೂರು: ತಾಲೂಕಿನ ಕರಡಿಹಳ್ಳಿ ಕಾವಲು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಹಂಗಾಮಿಯಾಗಿ ನೀಡಿರುವ ಭೂಮಿಯನ್ನು ಕಾಯಂ ಮಂಜೂರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ಗೆ ಮನವಿ ಸಲ್ಲಿಸಿದರು.
ತಾಲೂಕಿನ ಕರಡಿಹಳ್ಳಿ ಕಾವಲು ಗ್ರಾಮದ ಸರ್ವೇ ನಂಬರ್ 1ರಲ್ಲಿ ಕೆಂಪನಹಳ್ಳಿಯ 38 ಪರಿಶಿಷ್ಟರಿಗೆ ಖುಷ್ಕಿ ಸಾಗುವಳಿಗಾಗಿ ತಲಾ 3 ಎಕರೆಯಂತೆ 1960 ರಲ್ಲಿ ಭೂಮಿಯನ್ನು ಹಂಗಾಮಿಯಾಗಿ ಮಂಜೂರು ಮಾಡಲಾಗಿತ್ತು. ಆ ಭೂಮಿಗೆ ಹಂಗಾಮಿಯಾಗಿ ಸಾಗುವಳಿ ಚೀಟಿ ಸೇರಿದಂತೆ ದಾಖಲೆಗಳನ್ನು ನೀಡಲಾಗಿದೆ. ಹಾಗಾಗಿ ಅಲ್ಲಿನ ಪರಿಶಿಷ್ಟ ಕುಟುಂಬದವರು ಆ ಭೂಮಿಯಿಂದ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ತಿಳಿಸಿದರು.
ನಂತರದ ದಿನಗಳಲ್ಲಿ ಆ ಭೂಮಿಯನ್ನು ಆತಿಕ್ರಮಣ ಮಾಡಿ ಅಧಿಕಾರಿಗಳು ಬೇರೆಯವರಿಗೆ ಮಂಜೂರು ಮಾಡಿದ್ದು ನಂತರ ಸ್ಥಳ ಪರಿಶೀಲನೆ ವೇಳೆ ಭೌತಿಕವಾಗಿ ಭೂಮಿ ಲಭ್ಯವಿಲ್ಲದ ಕಾರಣ ಆ ಮಂಜೂರಾತಿ ರದ್ದುಪಡಿಸಲಾಗಿದೆ. ಇದರಿಂದ ಹೊಸದಾಗಿ ಭೂಮಿ ಮಂಜೂರು ಮಾಡಿಸಿಕೊಂಡವರು ನ್ಯಾಯಾಲಯದ ಮೆಟ್ಟಿಲೇರಿದ್ದು ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕೂಲಂಕಷವಾಗಿ ಪರಿಶೀಲನೆ ನಡೆಸಿ ಪರಿಶಿಷ್ಟರಿಗೆ ಭೂಮಿ ಕಾಯಂ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಕೆ.ಸಿ.ವಸಂತಕುಮಾರ್, ಮುಖಂಡರಾದ ಎಂ.ಸಿ.ಜಯರಾಮಯ್ಯ, ವಿ.ಧರ್ಮೇಶ್ ಯಶೋಧರ, ಸಂತ್ರಸ್ತರಾದ ದೊಡ್ಡಯ್ಯ, ಜವರಯ್ಯ, ಶಾಂತಮ್ಮ, ಕೆ.ಎಸ್.ಈಶ್ವರ, ನಾಗರಾಜ್, ಪುಟ್ಟಲಕ್ಷ್ಮಿ, ಲಲಿತಮ್ಮ, ಭದ್ರಯ್ಯ, ಅಂಬಿಕಾ ಮತ್ತಿತರರಿದ್ದರು.