More

    16ರೊಳಗೆ ಮೆಕ್ಕೆಜೋಳ ಪರಿಹಾರಕ್ಕೆ ಅರ್ಜಿ ಸಲ್ಲಿಸಿ: ಡಿಸಿ ಸಲಹೆ

    ಶಿವಮೊಗ್ಗ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆಗೆ ಬೆಳೆವಿಮೆ ಯೋಜನೆಯಡಿ ನಿಗದಿತ ಶುಲ್ಕ ಪಾವತಿಸಿ ಈಗಾಗಲೇ ನೋಂದಣಿ ಮಾಡಿಸಿರುವ ರೈತರು ವೈಯಕ್ತಿಕ ನಷ್ಟ ಪರಿಹಾರಕ್ಕಾಗಿ ಆ.16ರೊಳಗೆ ಅರ್ಜಿ ಸಲ್ಲಿಸುವಂತೆ ಡಿಸಿ ಡಾ. ಆರ್.ಸೆಲ್ವಮಣಿ ಸಲಹೆ ನೀಡಿದರು.
    ಡಿಸಿ ಕಚೇರಿಯಲ್ಲಿ ಗುರುವಾರ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೃಷಿ ಇಲಾಖೆಯಿಂದ ಜಿಲ್ಲಾಮಟ್ಟದ ಜಂಟಿ ಸಮಿತಿ ಸಭೆ ನಡೆಸಿದ ಅವರು, ಈಗಾಗಲೇ ಪೂರ್ಣ ಬೆಳೆ ಹಾನಿಯಾಗಿರುವ ರೈತರು ಸ್ಥಳೀಯ ಪ್ರಕೃತಿ ವಿಕೋಪ ಘಟಕದಡಿ ವಿಮಾ ಸಂಸ್ಥೆಯಿಂದ ಪರಿಹಾರಕ್ಕಾಗಿ ವಿಮೆಗೆ ನೋಂದಣಿ ಮಾಡಿಸಿದ ಸ್ವೀಕೃತಿ, ಪಹಣಿ ಮತ್ತು ಆಧಾರ್ ಕಾರ್ಡ್‌ನ ನಕಲು ಪ್ರತಿಯೊಂದಿಗೆ ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮನವಿ ಸಲ್ಲಿಸುವಂತೆ ಸೂಚಿಸಿದರು.
    ಪ್ರಸ್ತುತ ಈ ವಾರಾಂತ್ಯದಲ್ಲಿ ಸಾಲುಸಾಲು ಸರ್ಕಾರಿ ರಜೆ ಇರುವುದರಿಂದ ರೈತರು ಅರ್ಜಿ ಸಲ್ಲಿಸಲು ಅಡಚಣೆ ಉಂಟಾಗದಂತೆ ಹಾಗೂ ಅವರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಚೇರಿಯಲ್ಲಿದ್ದು ರೈತರ ಅನುಕೂಲಕ್ಕೆ ಮಾಹಿತಿ ಒದಗಿಸುವಂತೆ ಹಾಗೂ ರಜಾ ದಿನದಲ್ಲಿಯೂ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
    ರೈತರು ತಮ್ಮ ಬೆಳೆ ಹಾನಿಯ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸುವವರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನದೊಳಗೆ ಪ್ರಸ್ತಾವನೆ ಸಲ್ಲಿಸಬಹುದು. ನಿಗದಿತ ಕಾಲಾವಧಿಯಲ್ಲಿ ಅರ್ಜಿ ಸಲ್ಲಿಸಿದ ರೈತರ ಮಾಹಿತಿಯನ್ನು ಪರಿಹಾರಕ್ಕಾಗಿ ವಿಮಾ ಸಂಸ್ಥೆಗೆ ಕಳುಹಿಸಿಕೊಡಲಾಗುವುದು. ವಿಮಾ ಸಂಸ್ಥೆಯು ಕ್ಷೇತ್ರಕ್ಕೆ ಭೇಟಿ ನೀಡಿ ಬೆಳೆಹಾನಿ ಪ್ರಮಾಣ ಆಧರಿಸಿ ಪರಿಹಾರ ನಿರ್ಧರಿಸಿ ಪರಿಹಾರಧನ ನೀಡಲು ಕ್ರಮ ವಹಿಸುವರು ಎಂದರು.
    ಪ್ರಸ್ತುತ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನಯಡಿ ಬೆಳೆ ವಿಮೆ ನೋಂದಾಯಿಸಿದ ರೈತರಿಗೆ ಹವಾಮಾನ ವೈಪರಿತ್ಯಗಳಾದ ಹೆಚ್ಚಿನ ಮಳೆ, ನೆರೆ, ಪ್ರವಾಹಗಳಿಂದ ಬೆಳೆ ಮುಳುಗಡೆ, ದೀರ್ಘಕಾಲದ ತೇವಾಂಶದ ಕೊರತೆ, ತೀವ್ರ ಬರಗಾಲ ಮುಂತಾದವುಗಳಿಂದ ಅಧಿಸೂಚಿತ ವಿಮಾ ಘಟಕದಲ್ಲಿ ಬಿತ್ತನೆಯಾದ ನಂತರ ಕಟಾವಿಗೆ ಮೊದಲು ನಿರೀಕ್ಷಿತ ಇಳುವರಿಯು ಪ್ರಾರಂಭಿಕ ಇಳುವರಿಯ ಶೇ.50ಕ್ಕಿಂತ ಕಡಿಮೆಯಾಗಬಹುದಾದ ಸಂದರ್ಭದಲ್ಲಿ ವಿಮಾ ನಷ್ಟ ಮೌಲ್ಯಮಾಪನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಜಿಲ್ಲಾಮಟ್ಟದ ಜಂಟಿ ಸಮಿತಿಯನ್ನು ಈಗಾಗಲೇ ಆದೇಶಿಸಲಾಗಿದೆ ಎಂದವರು ತಿಳಿಸಿದರು.
    ಜಂಟಿ ಕೃಷಿ ನಿರ್ದೇಶಕಿ ಜಿ.ಸಿ. ಪೂರ್ಣಿಮಾ, ತೋಟಗಾರಿಕೆ ಉಪನಿರ್ದೇಶಕ ಬಸವರಾಜಪ್ಪ, ರೈತ ಪ್ರತಿನಿಧಿಗಳಾದ ಪ್ರಕಾಶ್, ಪ್ರೇಮಕುಮಾರಗೌಡ, ಚಂದ್ರಶೇಖರ್, ಮಲ್ಲಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts