ಜಗಳೂರು: ಜನರ ಆಶಯದಂತೆ ಪಟ್ಟಣದ ಮುಖ್ಯರಸ್ತೆಯ ವಿಸ್ತರಣೆಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಹಳೇ ತಾಲೂಕು ಕಚೇರಿ ಆವರಣದಲ್ಲಿ ಭಾನುವಾರ ಪೌರಕಾರ್ಮಿಕರೊಂದಿಗೆ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಟ್ಟಣದಲ್ಲಿ ಜನಸಂಖ್ಯೆ ದ್ವಿಗುಣಗೊಂಡಿದ್ದು, ವಾಹನಗಳ ಸಂಚಾರವೂ ಹೆಚ್ಚಾಗುತ್ತಿದೆ. ಆದ್ದರಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ಬೈಪಾಸ್ ರಸ್ತೆಯವರೆಗೂ ರಸ್ತೆ ಕಿರಿದಾಗಿದ್ದು, ರಸ್ತೆ ವಿಸ್ತರಣೆ ಮಾಡಲು ಸಾರ್ವಜನಿಕರಿಂದ ಒತ್ತಾಯ ಕೇಳಿ ಬರುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಕಾರ್ಯಕ್ಕೆ ಮೊದಲ ಅದ್ಯತೆ ನೀಡಲಾಗುವುದು ಎಂದರು.
57 ಕೆರೆ ತುಂಬಿಸುವುದೇ ನನ್ನ ಗುರಿ:
ಮುಂದಿನ ಮೇ ತಿಂಗಳ ಒಳಗೆ ನಮ್ಮ ಕ್ಷೇತ್ರದ ವ್ಯಾಪ್ತಿಯ ಎಲ್ಲ 57 ಕೆರೆಗಳನ್ನು ತುಂಬಿಸಲು ಬದ್ಧನಾಗಿದ್ದೇನೆ. ಈಗಾಗಲೇ 11 ಕೆರೆಗಳಿಗೆ ನೀರು ಹರಿದಿದೆ. ಉಳಿದಂತೆ ಕಾಮಗಾರಿ ವಿಳಂಬದ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದು, ಮೇ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸುತ್ತೇನೆ. ಅಲ್ಲದೆ, ಭದ್ರಾ ಮೇಲ್ದಂಡೆ ಯೋಜನೆ ಸಹ ಕಾಮಗಾರಿ ತ್ವರಿತಕ್ಕೆ ಸೂಚಿಸಲಾಗಿದೆ. ಅದು ಸಹ ಪೂರ್ಣಗೊಳಿಸಲು ಎಲ್ಲ ಪಕ್ಷಗಳ ಮುಖಂಡರು ಸಹಕಾರ ನೀಡಬೇಕು ಎಂದರು.
ಹಳೇ ತಹಸೀಲ್ದಾರ್ ಕಚೇರಿ ಕೆಡವಿ, ಈ ಜಾಗದಲ್ಲಿ ಸರ್ಕಾರಿ ಕಚೇರಿಗಳ ಕಟ್ಟಡ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಬ್ರಿಟಿಷರ ಕಾಲದ ಈ ಕಟ್ಟಡ ತೆರವುಗೊಳಿಸಿ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸದಸ್ಯ ರವಿಕುಮಾರ್, ವಾಲಿಬಾಲ್ ತಿಮ್ಮಾರೆಡ್ಡಿ, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕಾ, ಆರೋಗ್ಯಾಧಿಕಾರಿ ಅಮ್ರಿನ್ ಖಾನಂ, ಜಿಲಾನಿ, ರಾಜೇಶ್, ರಘು, ರಘುವೀರ್, ಪಂಚಣ್ಣ, ಪಲ್ಲಾಗಟ್ಟೆ ಶೇಖರಪ್ಪ, ಸಿ.ತಿಪ್ಪೇಸ್ವಾಮಿ, ಗೌಸ್ ಅಹಮದ್ ಮತ್ತಿತರರಿದ್ದರು.