ಮಂಗಳೂರು: ಜಗತ್ತಿನಲ್ಲಿ ಸ್ತ್ರೀಯನ್ನು ಮಾತೃಸ್ವರೂಪದಲ್ಲಿ ಗೌರವಿಸುವ ದೇಶವಿದ್ದರೆ ಅದು ಭಾರತ ಮಾತ್ರ. ಮಹಿಳೆ ಇಲ್ಲದ ಜಗತ್ತನ್ನು ಊಹಿಸಲೇ ಸಾಧ್ಯವಿಲ್ಲ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವಕೀಲ ಮಹೇಶ್ ಕಜೆ ಹೇಳಿದರು.
ದ.ಕ ಜಿಲ್ಲಾ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ವಿಭಾಗ ಬಂಟ್ವಾಳದ ತುಳು ಶಿವಳ್ಳಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೈದಿಕ ಪರಂಪರೆ ಅಥವಾ ಋಷಿ ಪರಂಪರೆಯಲ್ಲೇ ಇರಬಹುದು. ಸ್ತ್ರೀ ಯಾವತ್ತೂ ಪರಿಪೂರ್ಣತೆಗೆ ಸಾಕ್ಷಿಯಾಗಿ ನಿಲ್ಲುತ್ತಾಳೆ, ಆಕೆಯನ್ನು ಹೊರತಾದ ಸಮಾಜವನ್ನು ಕಲ್ಪಿಸುವುದೂ ಅಸಾಧ್ಯ. ಸೀಮಿತ ಎನ್ನುವ ಕಾಲದಿಂದ ದೇಶದ ಅತ್ಯುನ್ನತ ಸ್ಥಾನವನ್ನು ಪಡೆಯುವ ಮಟ್ಟಿಗೆ ಹೆಣ್ಣು ಬದಲಾಗಿದ್ದಾಳೆ. ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮ ನಿಂತು ತನ್ನ ಸಾಮರ್ಥ್ಯದ ಅರಿವು ಮೂಡಿಸಿದ್ದಾಳೆ. ಹೆಣ್ಣು ಆಕಾಶದೆತ್ತರದಷ್ಟನ್ನೂ ಸಾಧಿಸಬಲ್ಲಳು ಎಂಬುದನ್ನು ಸಾಧಿಸಿ ತೋರಿಸಿದ ಅನೇಕ ಮಹಿಳೆಯರು ನಮ್ಮ ನಡುವೆ ಇದ್ದಾರೆ. ಅವರ ಸಾಧನೆಯ ಪಥ ಎಲ್ಲರಿಗೂ ದಾರಿ ದೀಪವಾಗಲಿ ಎಂದರು.
ಮಂಗಳೂರಿನ ಸ್ವಸ್ತಿಕ್ ಕಾಲೇಜಿನ ಪ್ರಾಂಶುಪಾಲೆ ಡಾ. ಮಾಲಿನಿ ಹೆಬ್ಬಾರ್ ಮಾತನಾಡಿ, ಶಿಕ್ಷಣ, ಸ್ವಾವಲಂಬನೆ, ಸ್ವಾಭಿಮಾನವನ್ನು ಮಹಿಳೆಯರು ಬದುಕಿನಲ್ಲಿ ರೂಢಿಸಿಕೊಂಡಾಗ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ. ಮಹಿಳೆ ಪುರುಷರನ್ನು ಪ್ರಶ್ನಿಸಬಹುದೇ ಹೊರತು ಕೌಟುಂಬಿಕ ಸಮಗ್ರತೆಯಲ್ಲಿ ಈರ್ವರ ಅನಿವಾರ್ಯತೆಯನ್ನೂ ಅರ್ಥ ಮಾಡಿಕೊಂಡು ಮುಂದೆ ಸಾಗಬೇಕಾಗುತ್ತದೆ ಎಂದರು.
ಬಿ.ಸಿ.ರೋಡು ಸೋಮಯಾಜಿ ಆಸ್ಪತ್ರೆಯ ವೈದ್ಯೆ ಡಾ.ಶಶಿಕಲಾ ಸೋಮಯಾಜಿ, ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಶ್ರೀ ಗಿರಿ ಪ್ರಕಾಶ್ ತಂತ್ರಿ, ಬಂಟ್ವಾಳ ತಾಲೂಕು ಶಿವಳ್ಳಿ ಸಂಗಮದ ಅಧ್ಯಕ್ಷ ರಾಜಾರಾಮ ಭಟ್, ಬಂಟ್ವಾಳ ತಾಲೂಕು ಸಂಚಾಲಕಿ ಭಾರತಿ ರಾಜಮಣಿ, ಭಾರತೀ ಶ್ರೀಧರ್, ಪ್ರೇಮಲತಾ ರಾವ್ ಪುತ್ತೂರು, ಮಂಗಳೂರಿನ ಸಂಚಾಲಕಿಯರಾದ ಶಶಿಪ್ರಭಾ ಐತಶಳ್, ವಿಜಯಲಕ್ಷ್ಮಿ ಭಟ್ ಉಪಸ್ಥಿತರಿದ್ದರು.
ಮಹಿಳಾ ಸಾಧಕರಾದ ದೇವಿ ನಾರಾಯಣ ಭಟ್ ಕೈಯೂರ್, ಮಹಾಲಕ್ಷ್ಮಿ ಅರ್ಕಮೆ, ರೇಣುಕಾ ಸುಧೀರ್ ಬೆಳ್ತಂಗಡಿ, ಮಲ್ಲಿಕಾ ರಾಧಾಕೃಷ್ಣ ತಂತ್ರಿ ಬೆಂಜನಪದವು ಅವರನ್ನು ಗೌರವಿಸಲಾಯಿತು. ದ.ಕ ಜಿಲ್ಲಾ ಮಹಿಳಾ ವಿಭಾಗದ ಸಂಚಾಲಕಿ ವಕೀಲೆ ಉಮಾ ಎನ್. ಸೋಮಯಾಜಿ ಸ್ವಾಗತಿಸಿದರು. ಪವಿತ್ರಾ ಮಯ್ಯ ಪ್ರಾರ್ಥಿಸಿದರು. ಪೂರ್ಣಿಮಾ ಪ್ರಭಾಕರ್ ಪೇಜಾವರ ನಿರೂಪಿಸಿದರು. ನಿವೃತ್ತ ಪ್ರಾಧ್ಯಾಕಿ ವತ್ಸಲಾ ರಾಜ್ಞಿ ವಂದಿಸಿದರು.
———————
ಪ್ರಸ್ತುತ ಮಹಿಳೆಯರು ಯಾವುದೇ ಕ್ಷೇತ್ರದಲ್ಲಿಯೂ ಹಿಂದುಳಿದಿಲ್ಲ. ಹೀಗಿರುವಾಗ ಅಬಲೆಯಾಗಲು ಹೇಗೆ ಸಾಧ್ಯ ? ಹಾಗೆಯೇ ಸಮಾಜದಲ್ಲಿ ಲಿಂಗ ಸೂಕ್ಷ್ಮತೆಯ ಅರಿವು ಮೂಡಬೇಕು. ಅಸಮಾನತೆಯ ಛಾಯೆ ಅಳಿಯಬೇಕು. ಸಮಾಜದಲ್ಲಿ ಮಹಿಳೆಯರ ಸ್ಥಾನಮಾನವನ್ನು ಅರ್ಥ ಮಾಡಿಕೊಂಡು ಗೌರವಿಸಬೇಕು. ಸಂಸಾರದ ನೊಗ ಹೊತ್ತುಕೊಂಡ ಮಹಿಳೆ ಸಾಮಾಜಿಕವಾಗಿಯೂ ಬಹಳ ಪ್ರಬುದ್ಧವಾಗಿರುವುದು ಹೆಮ್ಮೆಯ ವಿಷಯ.
ಮಹೇಶ್ ಕಜೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ