ಔರಾಂಗಾಬಾದ್: ಮೃತ ಯೋಧನ ಮಗಳಿಗೆ ಶಾಲೆಯಲ್ಲಿ ಪ್ರವೇಶ ನಿರಾಕರಿಸಿದೆ ಎಂದು ಯೋಧನ ಪತ್ನಿ ಆರೋಪಿಸಿದ್ದಾರೆ.
ಮಹಾರಾಷ್ಟ್ರದ ನಾಂದೇಡ್ನ ಶಾಲೆಯು ಒಂದನೇ ತರಗತಿ ಪ್ರವೇಶಕ್ಕೆ ನಿರಾಕರಿಸಿದ್ದು, ಜಿಲ್ಲಾ ಸೈನಿಕ ಕಲ್ಯಾಣ ಕಚೇರಿಯಿಂದ ಪತ್ರ ತರಲು ತಿಳಿಸಿದ್ದಾರೆ ಎಂದು ಯೋಧನ ಪತ್ನಿ ಆರೋಪಿಸಿದ್ದಾರೆ.
ನವೆಂಬರ್ 2016 ರಲ್ಲಿ ಜಮ್ಮು ಕಾಶ್ಮೀರದಲ್ಲಿ ಶೀತಲ್ ಕದಮ್ ಅವರ ಪತಿ, ಯೋಧ ಮೃತಪಟ್ಟಿದ್ದರು. ನಾನು ಕಳೆದ 15 ದಿನಗಳಿಂದ ಶಾಲೆಗೆ ಅಲೆಯುತ್ತಿದ್ದೇನೆ. ನಾನು ಶಾಲೆ ಶುಲ್ಕ ಭರಿಸಲು ತಯಾರಿದ್ದೇನೆ. ಅಲ್ಲದೆ ಸೈನಿಕ ಕಲ್ಯಾಣ ಕಚೇರಿಯ ಪತ್ರವೂ ಇದೆ. ಆದರೂ ನನ್ನ ಮಗಳಿಗೆ ಒಂದನೇ ತರಗತಿಗೆ ಪ್ರವೇಶ ಕೊಡಲು ನಿರಾಕರಿಸುತ್ತಿದ್ದಾರೆ. ಅಲ್ಲದೆ ಶಾಲೆ ಸಿಬ್ಬಂದಿ ಅವಮಾನಿಸಿದ್ದಾರೆ ಎಂದು ದೂರಿದ್ದಾರೆ.
ಮೃತ ಯೋಧನ ಮಗಳಿಗೆ ಪ್ರವೇಶ ಕಲ್ಪಿಸಿ ಎಂದು ನಾವು ಶಾಲೆಗೆ ಮತ್ತು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದೇವೆ. ನಮ್ಮ ಪತ್ರವನ್ನು ಅವರು ನಿರ್ಲಕ್ಷಿಸಿದರೆ, ಶಾಲೆಗೆ ಸಮನ್ಸ್ ನೀಡುತ್ತೇವೆ ಎಂದು ಸೈನಿಕ ಕಲ್ಯಾಣ ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.
ಆದರೆ ಶೀತಲ್ ಕದಮ್ ಅವರು ಸೈನಿಕ ಕಲ್ಯಾಣ ಕಚೇರಿಯ ಪತ್ರವನ್ನು ಶಾಲೆಯ ಸ್ವಾಗತ ಕಚೇರಿಯಲ್ಲೇ ತಿರಸ್ಕರಿಸಲಾಯಿತು ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಲು ಶಾಲಾ ಆಡಲಿತ ಸಂಸ್ಥೆ ನಿರಾಕರಿಸಿದೆ. ನಾಂದೇಡ್ ಜಿಲ್ಲಾ ಉಸ್ತುವಾರಿ ಸಚಿವ ಅಶೋಕ್ ಚವ್ಹಾಣ್, ಮತ್ತೊಂದು ಶಾಲೆಯಲ್ಲಿ ಪ್ರವೇಶ ಕೊಡಿಸಿದ್ದಾರೆ.
ಪ್ರಕರಣದ ಬಗ್ಗೆ ಪರಿಶೀಲಿಸಲಾಗುವುದು. ಶಾಲೆಯು ಮಗುವಿಗೆ ಪ್ರವೇಶ ನಿರಾಕರಿಸಿದ್ದು ಸಾಬೀತಾದರೆ ಶಾಲೆಯ ಅನುಮೋದನೆಯನ್ನು ರದ್ದುಗೊಳಿಸಲು ಕ್ರಮ ವಹಿಸಲಾಗುವುದು ಎಂದು ಶಿಕ್ಷಣಾಧಿಕಾರಿ ಪ್ರಶಾಂತ್ ದಿಗ್ಸಕರ್ ಹೇಳಿದ್ದಾರೆ. (ಏಜೆನ್ಸೀಸ್)