ಕೊಲ್ಹಾಪುರ: ರಾಜ್ಯದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ ದರೋಡೆಕೋರರ ಗುಂಪಿನ ಮೇಲೆ ಮಹಾರಾಷ್ಟ್ರ ಪೊಲೀಸರು ಮಂಗಳವಾರ ತಡ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ.
ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಇಬ್ಬರಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜಸ್ತಾನದ ಮೂವರ ತಂಡ ಧಾರವಾಡ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ದರೋಡೆ, ಕೊಲೆ ಹಾಗೂ ಸುಲಿಗೆ ಪ್ರಕರಣ ನಡೆಸುತ್ತಿತ್ತು. ಇವರ ಬಂಧನಕ್ಕೆ ಧಾರವಾಡ ಪೊಲೀಸರು ಮುಂದಾಗಿದ್ದರು. ಮಾಹಿತಿ ತಿಳಿದು ಮೂವರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿಂದ ರಾಜಸ್ತಾನಕ್ಕೆ ಪರಾರಿಯಾಗಲು ಮುಂದಾಗಿದ್ದರು.
ತಂಡ ಪರಾರಿಯಾಗುತ್ತಿರುವ ಮಾಹಿತಿಯನ್ನು ರಾಜ್ಯದ ಪೊಲೀಸರು ಮಹಾರಾಷ್ಟ್ರ ಪೊಲೀಸರಿಗೆ ನೀಡಿದ್ದರು. ಕೊಲ್ಹಾಪುರದ ಖೀನೆ ಟೋಲ್ ಬಳಿ ತಂಡದ ಮೇಲೆ ಮಹಾರಾಷ್ಟ್ರ ಪೊಲೀಸರು ಗುಂಡಿನ ದಾಳಿ ನಡೆಸಿದರು ಎಂದು ತಿಳಿದು ಬಂದಿದೆ. (ದಿಗ್ವಿಜಯ ನ್ಯೂಸ್)