ಮುಂಬೈ: ಬಾಂಬ್ ಸ್ಪೋಟಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ಪಡೆ (ಎಟಿಎಸ್) ಬಂಧಿಸಿದೆ.
ಇದನ್ನೂ ಓದಿ: ಭೂಗತ ಪಾತಕಿ ರವಿ ಪೂಜಾರಿಗೆ ಶಾಕ್ ನೀಡಲು ಇಡಿ ಸಿದ್ಧತೆ
ಬಂಧಿತನನ್ನು ಕಮ್ರಾನ್ ಅಮೀನ್ ಖಾನ್ (25) ಎಂದು ಗುರುತಿಸಲಾಗಿದೆ. ಆರೋಪಿ ಖಾನ್, ವಾಟ್ಸ್ಆ್ಯಪ್ ಮೂಲಕ ಉತ್ತರ ಪ್ರದೇಶ ರಾಜಧಾನಿ ಲಖನೌದ ಪೊಲೀಸ್ ಮುಖ್ಯ ಕಚೇರಿಯ ಸಾಮಾಜಿಕ ಜಾಲತಾಣ ಸಹಾಯವಾಣಿಗೆ ಬೆದರಿಕೆ ಸಂದೇಶ ರವಾನಿಸಿದ್ದ. ಸಮುದಾಯವೊಂದನ್ನು ಗುರಿಯಾಗಿಸುತ್ತಿರುವ ಸಿಎಂ ಯೋಗಿಯನ್ನು ಬಾಂಬ್ ಸ್ಪೋಟಿಸಿ ಕೊಲ್ಲುತ್ತೇನೆ ಎಂದು ಬರೆದಿದ್ದ.
ಈ ಸಂಬಂಧ ಉತ್ತರ ಪ್ರದೇಶದ ಪೊಲೀಸರು ಭಾರತೀಯ ದಂಡ ಸಂಹಿತೆ(ಐಪಿಸಿ) ಮತ್ತು ಐಟಿ ಕಾಯ್ದೆ ಅನ್ವಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಉತ್ತರ ಪ್ರದೇಶದ ಸ್ಪೆಷಲ್ ಟಾಸ್ಕ್ ಫೋರ್ಸ್ ಒಂದು ಆರೋಪಿಯ ಜಾಲವನ್ನು ಪತ್ತೆ ಹಚ್ಚಲು ಆರಂಭಿಸಿತು. ಸಂದೇಶ ಬಂದ ನಂಬರ್ ಅನ್ನು ಮಹಾರಾಷ್ಟ್ರ ಎಟಿಎಸ್ ಸಹಕಾರದೊಂದಿಗೆ ಹುಡುಕಾಡಿದಾಗ ಆರೋಪಿ ಖಾನ್ ಮುಂಬೈನ ಛುನಭಟ್ಟಿ ಏರಿಯಾದಲ್ಲಿ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: ಪ್ರೀತಿಸುವ ಸೋಗಿನಲ್ಲಿ ವಿವಾಹಿತನಿಂದ ಯುವತಿಗೆ 8.48 ಲಕ್ಷ ರೂ. ವಂಚನೆ
ಆರೋಪಿಯನ್ನು ಉತ್ತರ ಪ್ರದೇಶದ ಎಸ್ಟಿಎಫ್ ವಶಕ್ಕೆ ಒಪ್ಪಿಸಲಾಗಿದ್ದು, ಭಾನುವಾರ ಆರೋಪಿಯನ್ನು ಮುಂಬೈ ಕೋರ್ಟ್ ಮುಂದೆ ಹಾಜರುಪಡಿಸಿ, ನಂತರ ಮುಂದಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದುಕೊಳ್ಳಲಿದ್ದಾರೆ. (ಏಜೆನ್ಸೀಸ್)
ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಕೊಲೆ ಬೆದರಿಕೆ- ಪ್ರಕರಣ ದಾಖಲಿಸಿದ ಪೊಲೀಸರು