ಮಾಗಡಿ: ತಂಬಾಕು ನಿಷೇಧದ ನಾಮಲಕ ಅಳವಡಿಸದ ಅಂಗಡಿಗಳ ಮೇಲೆ ಗುರುವಾರ ದಿಢೀರ್ ದಾಳಿ ನಡೆಸಿರುವ ಜಿಲ್ಲಾ ತಂಬಾಕು ವಿಭಾಗದ ಸಮಾಜ ಆಪ್ತ ಸಮಾಲೋಚಕ ಚಂದ್ರಶೇಖರ್ ಹಾಗೂ ತಾಲೂಕು ಹಿರಿಯ ಆರೋಗ್ಯ ಸಹಾಯಕರ ನೇತೃತ್ವದ ತಂಡ ಮಾಲೀಕರಿಂದ 2,200 ರೂ. ದಂಡ ವಸೂಲಿ ಮಾಡಿದೆ. ಬೋರ್ಡ್
ಪಟ್ಟಣದ ಹೊಸಪೇಟೆ ಸರ್ಕಲ್, ಬೆಂಗಳೂರು ರಸ್ತೆಗಳ 22 ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ.
ನಂತರ ಮಾತನಾಡಿದ ಚಂದ್ರಶೇಖರ್, ಕೋವಿಡ್ -19ನಿಂದಾಗಿ ಕಳೆದ ಮೂರು ತಿಂಗಳಿಂದ ತಂಬಾಕು ನಿಷೇಧ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿತ್ತು. ಇಂದಿನಿಂದ ಮತ್ತೆ ಆರಂಭಿಸಲಾಗಿದೆ. ತಂಬಾಕು ನಿಷೇಧದ ನಾಮಲಕ ಅಳವಡಿಸದ ಅಂಗಡಿಗಳಿಗೆ ತಲಾ 100 ರೂ.ನಂತೆ ದಂಡ ವಿಧಿಸಲಾಗಿದೆ ಹಾಘೂ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುತ್ತಿದ್ದ ಇಬ್ಬರಿಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ -19 ಹಿನ್ನೆಲೆಯಲ್ಲಿ ತಂಬಾಕು ಉತ್ಪನ್ನಗಳನ್ನು ತ್ಯಜಿಸುವುದರಿಂದ ರೋಗವನ್ನು ಹತೋಟಿಗೆ ತರಬಹುದಾಗಿದೆ. ಎಲ್ಲ ಅಂಗಡಿ ಮಾಲೀಕರು ತಂಬಾಕು ನಿಯಮಗಳನ್ನು ಪಾಲಿಸಿ ವ್ಯಾಪಾರ ಮಾಡುವಂತೆ ಸೂಚಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆರ್. ರಂಗನಾಥ್ ಮಾತನಾಡಿ, ಜನರ ಆರೋಗ್ಯ ದೃಷ್ಟಿಯಿಂದ ತಂಬಾಕು ನಿಷೇಧ ಜಾರಿಗೆ ತಂದು, ಅರಿವು ಮೂಡಿಸುವ ಮೂಲಕ ಮಾಗಡಿಯನ್ನು ತಂಬಾಕು ಮುಕ್ತ ತಾಲೂಕು ಮಾಡುವುದು ನಮ್ಮ ಗುರಿಯಾಗಿದೆ ಎಂದರು.
ಹಿರಿಯ ಆರೋಗ್ಯ ಸಹಾಯಕರಾದ ಶಿವಸ್ವಾಮಿ, ಲೋಕೇಶ್ ಮೂರ್ತಿ, ಕಿರಿಯ ಆರೋಗ್ಯ ಸಹಾಯಕರಾದ ರಾಜಣ್ಣ, ಪ್ರಸನ್ನ ಕುಮಾರ್, ಪೊಲೀಸ್ ಪೇದೆ ತೌಫಿಕ್ ಇತರರು ಇದ್ದರು.