ಭೋಪಾಲ್: ಮಧ್ಯಪ್ರದೇಶ ರಾಜಕೀಯ ಹೈಡ್ರಾಮಕ್ಕೆ ಇಂದು ತೆರೆಬೀಳಲಿದೆ. ಶಾಸಕರ ರಾಜೀನಾಮೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಿಎಂ ಕಮಲ್ನಾಥ್ ಸುಪ್ರೀಂಕೋರ್ಟ್ ಆದೇಶದಂತೆ ಇಂದು ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತು ಮಾಡಬೇಕಿದೆ. ಹೀಗಿರುವಾಗ ಸ್ಪೀಕರ್ ಎನ್.ಪಿ. ಪ್ರಜಾಪತಿ ಅವರು ಗುರುವಾರ ಮಧ್ಯರಾತ್ರಿ ಜೋತಿರಾಧಿತ್ಯ ಸಿಂದಿಯಾ ಬಣದ 16 ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿರುವುದು ಕಮಲ್ ಸರ್ಕಾರವನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ.
ಶಾಸಕರ ರಾಜೀನಾಮೆಯಿಂದಾಗಿ 24 ವಿಧಾನಸಭಾ ಕ್ಷೇತ್ರಗಳಲ್ಲಿ 6 ತಿಂಗಳ ಒಳಗೆ ಉಪಚುನಾವಣೆ ಎದುರಾಗಲಿದೆ. ಆದರೆ, ಈಗ ಎದುರಾಗಿರುವ ಪ್ರಶ್ನೆಯೆಂದರೆ ಕಮಲ್ ನಾಥ್ ಹೇಗೆ ಬಹುಮತ ಸಾಬೀತುಪಡಿಸಲಿದ್ದಾರೆ ಎಂಬುದು. ಶಾಸಕರ ರಾಜೀನಾಮೆಯಿಂದ ಕಾಂಗ್ರೆಸ್ ಸಂಖ್ಯೆ 92ಕ್ಕೆ ಕುಸಿದಿದೆ. ಬಿಜೆಪಿ 107 ಶಾಸಕರ ಬೆಂಬಲ ಹೊಂದಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಶುಕ್ರವಾರ ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿವೆ. ಶಾಸಕರಿಬ್ಬರ ಸಾವು ಹಾಗೂ 22 ಬಂಡಾಯ ಶಾಸಕರ ರಾಜೀನಾಮೆಯಿಂದ ಸದನ ಬಲ 206ಕ್ಕೆ ಕುಸಿದ್ದು, ಬಹುಮತ ಸಾಬೀತಿಗೆ 104 ಸ್ಥಾನಗಳ ಅವಶ್ಯಕತೆ ಇದೆ. ಕಾಂಗ್ರೆಸ್ನೊಂದಿಗೆ ಕೈಜೋಡಿಸಿದ್ದ ಬಿಎಸ್ಪಿ(2), ಎಸ್ಪಿ(1) ಮತ್ತು ಪಕ್ಷೇತರ(4) ಶಾಸಕರು ಈಗಲೂ ಕಾಂಗ್ರೆಸ್ಗೆ ಬೆಂಬಲ ನೀಡಿದರೂ ಸಹ ಬಹುಮತ ಸಾಬೀತುಪಡಿಸವಲ್ಲಿ ಕಾಂಗ್ರೆಸ್ಗೆ ಕಷ್ಟವಾಗಲಿದೆ. ಇತ್ತ 107 ಸ್ಥಾನವನ್ನು ಹೊಂದಿರುವ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಇದೆ.
ಮಾರ್ಚ್ 10ರಂದು ಸಿಂದಿಯಾ ಬಣದ 22 ಶಾಸಕರು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದರಿಂದ ಮಧ್ಯಪ್ರದೇಶ ರಾಜಕೀಯದಲ್ಲಿ ಬಿಕ್ಕಟ್ಟು ಉಂಟಾಗಿದೆ. ಈಗಾಗಲೇ ಸಿಂಧಿಯಾ ಬಿಜೆಪಿಗೆ ಸೇರಿದ್ದಾರೆ. ಸಿಎಂ ಕಮಲ್ ನಾಥ್ ಮನವಿಯಂತೆ 6 ಶಾಸಕರನ್ನು ವಜಾಗೊಳಿಸಲಾಗಿದೆ. ಉಳಿದ 16 ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿರುವುದರಿಂದ ಇಂದು ನಡೆಯುವ ವಿಶ್ವಾಸಮತ ಯಾಚನೆ ನಂತರ ಮಧ್ಯಪ್ರದೇಶದ ರಾಜಕೀಯ ಬಿಕ್ಕಟ್ಟಿಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. (ಏಜೆನ್ಸೀಸ್)