ಹರಿಪ್ರಸಾದ್ ನಂದಳಿಕೆ
ಕರೊನಾ ವೈರಸ್ ನಿಯಂತ್ರಣ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಮಾಹಿತಿ, ಮಾರ್ಗದರ್ಶನ ನೀಡಲು ಭಾರತ ಸರ್ಕಾರ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಆ್ಯಪ್ ಮಾದರಿಯಲ್ಲಿ ಕೋವಿಡ್-19 ಮೊಬೈಲ್ ಅಪ್ಲಿಕೇಶನ್ ಅನ್ನು ಶಿರ್ವ ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳ ತಂಡ ಅಭಿವೃದ್ಧಿ ಪಡಿಸಿದೆ.
ವಿದ್ಯಾಲಯದ ಎರಡನೇ ವರ್ಷದ ವಿದ್ಯಾರ್ಥಿ ಸೂರಜ್ ನೇತೃತ್ವದ ತಂಡ ಹೊಸ ಮೊಬೈಲ್ ಆ್ಯಪ್ ಅಭಿವೃದ್ಧಿಗೊಳಿಸಿದೆ. ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕರೆಗೆ ಸ್ಪಂದಿಸಿರುವ ವಿದ್ಯಾರ್ಥಿಗಳು ಇದನ್ನು ರಚಿಸಿದ್ದಾರೆ.
ಆ್ಯಪ್ನಲ್ಲಿ ಏನಿದೆ?: ಈ ಮೊಬೈಲ್ ಆ್ಯಪ್ ರಾಜ್ಯದ ಕೋವಿಡ್ ಸೋಂಕಿನ ಪ್ರಸ್ತುತ ಅಂಕಿ ಅಂಶಗಳು, ಈ ರೋಗದ ಬಗೆಗಿರುವ ಮಿಥ್ಯೆ-ಸತ್ಯಗಳು, ಸೋಂಕಿನ ಬಗ್ಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ, ಪ್ರಶ್ನಾವಳಿಗಳ ಮೂಲಕ ಸ್ವ ಆರೋಗ್ಯ ಪರೀಕ್ಷೆ, ಹತ್ತಿರದಲ್ಲಿರುವ ಕೋವಿಡ್ ತಪಾಸಣಾ ಮತ್ತು ಚಿಕಿತ್ಸಾ ಕೇಂದ್ರಗಳ ಸಂಪರ್ಕ-ಮಾಹಿತಿ ಇತ್ಯಾದಿ ವೈಶಿಷ್ಟ್ಯಗಳನ್ನು ಹೊಂದಿದೆ. ವಿದ್ಯಾರ್ಥಿಗಳ ತಂಡಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣಾ ಯೋಜನೆಯಡಿ ಅನುದಾನ ನೀಡಿದೆ. ಗೂಗಲ್ ಸಂಸ್ಥೆಯಿಂದ ಅನುಮತಿ ದೊರೆತ ಕೂಡಲೇ ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಡಾ.ವಾಸುದೇವ ತಿಳಿಸಿದ್ದಾರೆ. ತಂಡದ ನಾಯಕ ಸೂರಜ್ ಜತೆಗೆ ದೀಪಕ್ ನಾಯಕ್, ಉಲ್ಲಾಸ್, ಸೌರಭ್ ಶೆಟ್ಟಿ, ಅಭಿಜಿತ್, ಹಿತ್ಯೇಶ್ ಆಚಾರ್, ಪ್ರಿನ್ಸ್ಟನ್ ಲೂಯಿಸ್ ಸಾಥ್ ನೀಡಿದ್ದಾರೆ.
ಕರೊನಾ ಸೋಂಕಿನ ಬಗ್ಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಹಾಗೂ ರಾಜ್ಯಕ್ಕೆ ಸಂಬಂಧಿಸಿ ಕೋವಿಡ್ -19 ಲಕ್ಷಣ ಇರುವವರು ಅಥವಾ ಮಾಹಿತಿ ಬೇಕಾದವರು ಈ ಆ್ಯಪ್ ಬಳಸಿಕೊಂಡು ಜಿಪಿಎಸ್ ಮೂಲಕ ಕ್ವಾರೈಂಟೈನ್ ಸೆಂಟರ್, ಕೋವಿಡ್ ಕ್ಲಿನಿಕ್ಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
ಸೂರಜ್, ಆ್ಯಪ್ ನಿರ್ಮಾಣ ತಂಡದ ರೂವಾರಿ