ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಉಪನ್ಯಾಸಕ, ಲೇಖಕ ಎಂ.ಪಿ.ಶ್ರೀನಾಥ್ ಆಯ್ಕೆಯಾದರು.
ಭಾನುವಾರ ಏಕಕಾಲಕ್ಕೆ ರಾಜ್ಯಾದ್ಯಂತ ಕಸಾಪ ರಾಜ್ಯ ಘಟಕ ಹಾಗೂ ಎಲ್ಲಾ ಜಿಲ್ಲಾ ಘಟಕಗಳಿಗೆ ಚುನಾವಣೆ ನಡೆಯಿತು. ದ.ಕ ಜಿಲ್ಲೆಯಲ್ಲಿ ಮಂಗಳೂರು ಅಲ್ಲದೆ ಮೂಡುಬಿದಿರೆ, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕು ಕಚೇರಿ, ಮೂಲ್ಕಿ ನಗರ ಪಂಚಾಯಿತಿ, ವಿಟ್ಲ ಪಟ್ಟಣ ಪಂಚಾಯಿತಿ, ಕೊಕ್ಕಡ ನಾಡ ಕಚೇರಿಯಲ್ಲಿ ಮತದಾನ ನಡೆಯಿತು.
ಬೆಳಗ್ಗೆ 8ರಿಂದ ಆರಂಭಗೊಂಡ ಮತದಾನ ಸಂಜೆ 4ರವರೆಗೂ ನಡೆಯತು. ಜಿಲ್ಲೆಯಲ್ಲಿ ಕಸಾಪ ಅಧ್ಯಕ್ಷ ಹುದ್ದೆಗೆ ಉಪನ್ಯಾಸಕ ಶ್ರೀನಾಥ್ ಹಾಗೂ ಮಂಗಳೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್.ವಾಸುದೇವ ಸ್ಪರ್ಧಿಸಿದ್ದರು. 4ರ ಬಳಿಕ ಮತ ಎಣಿಕೆ ಪ್ರಕ್ರಿಯೆ ನಡೆದು ಚುನಾವಣಾಧಿಕಾರಿ ತಹಸೀಲ್ದಾರ್ ಗುರುಪ್ರಸಾದ್ ಫಲಿತಾಂಶ ಪ್ರಕಟಿಸಿದರು.
ನೂತನ ಅಧ್ಯಕ್ಷರ ಬಗ್ಗೆ: ಶ್ರೀನಾಥ್ ಅವರು ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ 26 ವರ್ಷಗಳಿಂದ ಕನ್ನಡ ಉಪನ್ಯಾಸಕರು. ದ.ಕ. ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಯಾಗಿ 2008ರಿಂದ 2021ರವರೆಗೂ ಸೇವೆ ಸಲ್ಲಿಸಿದವರು. ಬೆಳ್ತಂಗಡಿ ತಾಲೂಕಿನಲ್ಲಿ 10 ಸಾಹಿತ್ಯ ಸಮ್ಮೇಳನ ಸಂಘಟಿಸಿದ್ದಾರೆ. ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನ ಸಮಿತಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. 2011ರಿಂದ 2014ರ ವರೆಗೆ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ದ.ಕ. ಜಿಲ್ಲೆಯಿಂದ ಸಾವಿರಕ್ಕೂ ಹೆಚ್ಚು ವೈಯುಕ್ತಿಕ ಆಜೀವ ಸದಸ್ಯರ ನೋಂದಣಿ ಮಾಡಿಸಿದ್ದಾರೆ. ಕಸಾಪ ಬೆಂಗಳೂರು ಪರೀಕ್ಷಾ ಸಲಹಾ ಸಮಿತಿ ಸದಸ್ಯರಾಗಿದ್ದರು.