ಬೆಂಗಳೂರು: ಲಾಕ್ಡೌನ್ ನಂತರ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ಒಂದು ಹಾಡನ್ನು ಹಾಡಿಸಬೇಕು ಎಂದು ‘ರಂಗಸಮುದ್ರ’ ಚಿತ್ರತಂಡದವರು ಅಂದುಕೊಂಡಿದ್ದರಂತೆ. ಆದರೆ, ಲಾಕ್ಡೌನ್ ಮುಗಿಯುವಷ್ಟರಲ್ಲಿ ಎಸ್ಪಿಬಿ ಸಹ ನಿಧನರಾಗಿದ್ದರು. ಈಗ ಆ ಹಾಡನ್ನು ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ಗಾಯಕ ಎಂ.ಎಂ. ಕೀರವಾಣಿ ಅವರಿಂದ ಹಾಡಿಸಲಾಗಿದೆ.
ಇದನ್ನೂ ಓದಿ: ಇನ್ನೊಂದು ತೆಲುಗು ಚಿತ್ರದಲ್ಲಿ ‘ಆ ದಿನಗಳು’ ಚೇತನ್ …
ಹೌದು, ಹೊಯ್ಸಳ ಕ್ರಿಯೇಷನ್ಸ್ರವರ ‘ರಂಗಸಮುದ್ರ’ ಚಲನಚಿತ್ರದ ಹಾಡಿಗೆ ಕೀರವಾಣಿ ಧ್ವನಿಯಾಗಿದ್ದಾರೆ. ದೇಸೀ ಮೋಹನ್ ಸಂಗೀತ ಸಂಯೋಜನೆ, ವಾಗೀಶ್ ಚನ್ನಗಿರಿ ಸಾಹಿತ್ಯ ಈ ಹಾಡಿಗಿಉದೆ. ಈ ಕುರಿತು ಮಾತನಾಡುವ ನಿರ್ದೇಶಕ ರಾಜಕುಮಾರ್ ಅಸ್ಕಿ, ‘ಚಿತ್ರದಲ್ಲಿ ಪ್ರಾಮುಖ್ಯತೆ ಹೊಂದಿರುವ ಈ ಹಾಡನ್ನು ಎಂ. ಎಂ. ಕೀರವಾಣಿರವರು ಹಾಡುವುದೇ ಸೂಕ್ತ ಎಂದು ನಿರ್ಧರಿಸಿದೆವು. ಅವರು ಸದ್ಯ ಬ್ಯುಸಿ ಷೆಡ್ಯೂಲ್ನಲ್ಲಿದ್ದರೂ ಕೂಡ ಕನ್ನಡ ಸಿನಿಮಾ ಎಂದ ಕೂಡಲೇ ಒಪ್ಪಿ ಹಾಡನ್ನು ಹಾಡಿದ್ದಾರೆ’ ಎಂದು ಸಂತಸ ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಕೀರವಾಣಿ ಅವರಿಂದ ಹಾಡಿಸುವುದಕ್ಕೆ ಹೋದ ಸಂದರ್ಭದಲ್ಲಿ, ಬಹಳ ದಿನಗಳ ನಂತರ ಕನ್ನಡದಲ್ಲಿ ವಚನ ಸಾಹಿತ್ಯ ನೆನಪಿಸುವ ಹಾಡನ್ನು ಹಾಡಿದ ಖುಷಿಯಿದೆ ಎಂದು ಕೀರವಾಣಿ ಖುಷಿಪಟ್ಟರಂತೆ. ಜತೆಗೆ, ತಮ್ಮ ವೃತ್ತಿ ಜೀವನವನ್ನು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಎಲ್. ವೈದ್ಯನಾಥನ್ ಮತ್ತು ಸಿ ಅಶ್ವತ್ಥ್ ಸಂಗೀತ ಸಂಯೋಜಿಸಿದ ಚಿತ್ರದಲ್ಲಿ ಸಂಗೀತ ನಿರ್ದೇಶಕರ ಸಹಾಯಕನಾಗಿ ಆರಂಭಿಸಿದ್ದನ್ನು ನೆನಪಿಸಿಕೊಂಡರಂತೆ.
ಇದನ್ನೂ ಓದಿ: ಪೊಗರು ಸಿನಿಮಾ ವಿವಾದ ಸುಖಾಂತ್ಯದ ಬಳಿಕ ಲಿಖಿತ ರೂಪದಲ್ಲಿ ಕ್ಷಮೆ ಕೇಳಿದ ಧ್ರುವ ಸರ್ಜಾ
ಸ್ಟಾರ್ ಡೈರೆಕ್ಟರ್ ಎಸ್.ಎಸ್. ರಾಜಮೌಳಿ ನಿರ್ದೇಶಿಸುತ್ತಿರುವ ಬಹು ನಿರೀಕ್ಷೆಯ ‘ಆರ್ ಆರ್ ಆರ್’ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡುತ್ತಿರುವ ಕೀರವಣಾ ಅವರ ಧ್ವನಿಯಲ್ಲಿ ಹೇಗೆ ಮೂಡಿಬಂದಿರಬಹುದೆಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಕುತೂಹಲ ತಣಿಯುವುದಕ್ಕೆ ಇನ್ನೂ ಕೆಲವು ದಿನಗಳ ಕಾಲ ಕಾಯಬೇಕು.