ಬೆಂಗಳೂರು: ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರವು ಬಿಡುಗಡೆಯಾಗಿ ಐದು ತಿಂಗಳುಗಳಾಗಿವೆ. ಈ ಚಿತ್ರದ ನಂತರ ಸುದೀಪ್ ಯಾವೊಂದು ಹೊಸ ಚಿತ್ರವನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಈಗ ತಮಿಳಿನ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್ಸ್ ಸುದೀಪ್ ಅಭಿನಯದಲ್ಲಿ ಕನ್ನಡ ಚಿತ್ರವೊಂದನ್ನು ನಿರ್ಮಿಸುತ್ತಿರುವ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ.
ಇದನ್ನೂ ಓದಿ: ವಿದೇಶದಲ್ಲೂ ಜೋರಾಗಿದೆ ‘ವಿಜಯಾನಂದ’ ಚಿತ್ರದ ಹವಾ!
‘ವಿಕ್ರಾಂತ್ ರೋಣ’ ನಂತರ ಸುದೀಪ್, ಅನೂಪ್ ಭಂಡಾರಿ ನಿರ್ದೇಶನದಲ್ಲಿ ‘ಬಿಲ್ಲ ರಂಗ ಭಾಷಾ’ ಚಿತ್ರದಲ್ಲಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಸುದೀಪ್ ಸಹ ‘ವಿಕ್ರಾಂತ್ ರೋಣ’ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಆ ಚಿತ್ರ ಶುರುವಾಗುತ್ತದೆ ಎಂದು ಹೇಳಿದ್ದರು. ಆದರೆ, ‘ವಿಕ್ರಾಂತ್ ರೋಣ’ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದಿರುವ ಹಿನ್ನೆಲೆಯಲ್ಲಿ, ಸುದೀಪ್ ಆ ಚಿತ್ರವನನ್ನು ಕೈಬಿಟ್ಟಿರುವ ಸುದ್ದಿ ಇದೆ. ಈ ಮಧ್ಯೆ, ಹೊಂಬಾಳೆ ಫಿಲಂಸ್ ನಿರ್ಮಾಣದ ಒಂದು ಚಿತ್ರದಲ್ಲಿ, ವೆಂಕಟ್ ಪ್ರಭು ನಿರ್ದೇಶನದ ಒಂದು ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು.
ಇದೀಗ ಬಂದಿರುವ ಸುದ್ದಿಯ ಪ್ರಕಾರ, ಲೈಕಾ ಸಂಸ್ಥೆಯ ಹೊಸ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಸುದೀಪ್ ಒಪ್ಪಿಕೊಂಡಿದ್ದಾರಂತೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯು ತಮಿಳಿನಲ್ಲಿ ‘ಎಂದಿರನ್’, ‘ಕಪ್ಪಾನ್’, ‘ದರ್ಬಾರ್’, ‘ಪೊನ್ನಿಯನ್ ಸೆಲ್ವನ್’, ‘ಇಂಡಿಯನ್ 2’ ಮುಂತಾದ ದೊಡ್ಡ ಚಿತ್ರಗಳನ್ನು ನಿರ್ಮಿಸುತ್ತಿದ್ದು, ಸುದೀಪ್ ಅಭಿನಯದ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡಕ್ಕೆ ಎಂಟ್ರಿ ಕೊಡುತ್ತಿರುವ ಸುದ್ದಿ ಇದೆ.
ಇದನ್ನೂ ಓದಿ: 14 ವರ್ಷಗಳ ನಂತರ ಜತೆಯಾಗಿ ನಟಿಸುತ್ತಿದ್ದಾರೆ ವಿಜಯ್-ತ್ರಿಷಾ!
ಆದರೆ, ಈ ವಿಷಯವಾಗಿ ಸುದೀಪ್ ಆಗಲೀ, ಲೈಕಾ ಸಂಸ್ಥೆಯ ಕಡೆಯಿಂದ ಯಾವುದೇ ಘೋಷಣೆಯಾಗಿಲ್ಲ. ಹಾಗಂತ ಸುಳ್ಳು ಎಂದು ಹೇಳಲೂ ಸಾಧ್ಯವಿಲ್ಲ. ಏಕೆಂದರೆ, ‘ವಿಕ್ರಾಂತ್ ರೋಣ’ ಚಿತ್ರದ ನಂತರ ಸುದೀಪ್ ದೊಡ್ಡ ಸಿನಿಮಾವೊಂದರ ಮೂಲಕ ಎಂಟ್ರಿ ಕೊಡುವುದಕ್ಕೆ ಸಜ್ಜಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಚಿತ್ರ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಸಾಧ್ಯತೆ ಇದೆ. ಹಾಗಾಗಿ, ಇದು ನಿಜ, ಸುಳ್ಳು ಎಂದು ಈಗಲೇ ತೀರ್ಮಾನಕ್ಕೆ ಬರುವುದು ಕಷ್ಟ.