ಕಾಸರಗೋಡು: ಲಾಟರಿಯಲ್ಲಿ ಐದು ಲಕ್ಷ ರೂ. ಬಹುಮಾನ ಗೆದ್ದ ವ್ಯಕ್ತಿ, ತಮ್ಮದೇ ಅಚಾತುರ್ಯದಿಂದಾಗಿ ಬಹುಮಾನದ ಮೊತ್ತ ಪಡೆಯಲು ಅಲೆದಾಡುವಂತಾಗಿದೆ.
ಜಿಲ್ಲೆಯ ಚೆಂಗಳ ಚೂರಿಪಳ್ಳ ನಿವಾಸಿ, ನೆಲ್ಲಿಕಟ್ಟೆಯಲ್ಲಿ ಆಟೋ ಚಾಲಕರಾಗಿರುವ ಮನ್ಸೂರ್ ಆಲಿ ಲಾಟರಿ ಬಹುಮಾನ ವಿಜೇತರು. ಅ.19ರ ಕೇರಳ ಲಾಟರಿ ಖರೀದಿಸಿದ್ದರು. ಮಂಗಳವಾರ ಎಂದಿನಂತೆ ಆಟೋ ನಿಲ್ದಾಣಕ್ಕೆ ಆಗಮಿಸಿ ತಮ್ಮಲ್ಲಿದ್ದ ಮೂರು ಟಿಕೆಟ್ಗಳ ಫಲಿತಾಂಶಕ್ಕಾಗಿ ಹುಡುಕಾಡಿದರು.
ಅವಸರದಿಂದ ಫಲಿತಾಂಶ ನೋಡಿ, ಬಹುಮಾನ ಬಂದಿಲ್ಲ ಎಂದು ತಿಳಿಸು ತಮ್ಮಲ್ಲಿದ್ದ ಎಲ್ಲ ಟಿಕೆಟ್ಗಳನ್ನೂ ಸಣ್ಣಚೂರುಗಳಾಗಿ ಹರಿದು ಎಸೆದರು. ಒಂದು ಗಂಟೆ ಬಳಿಕ ಲಾಟರಿ ಟಿಕೆಟ್ ಏಜೆಂಟ್ ಬಂದು ತಾವು ಖರೀದಿಸಿದ ಟಿಕೆಟ್ಗೆ ಐದು ಲಕ್ಷ ರೂ.ಬಹುಮಾನ ಬಂದಿದೆ ಎಂದು ತಿಳಿಸುತ್ತಿದ್ದಂತೆ, ಹರಿದು ಬಿಸಾಡಿದ ಟಿಕೆಟನ್ನು ಹುಡುಕಾಟ ಆರಂಭವಾಯಿತು. ಸ್ನೇಹಿತರಾದ ಆಟೋ ಚಾಲಕರೂ ಇವರಿಗೆ ಸಾಥ್ ನೀಡಿದರು.
ಎಲ್ಲ ಟಿಕೆಟ್ಗಳನ್ನು ಜೋಡಿಸಿದಾಗ ಅದೃಷ್ಟ ನಂಬರ್ ಲಭಿಸಿತ್ತು. ಇದನ್ನು ನೇರ ಜಿಲ್ಲಾ ಲಾಟರಿ ಕಚೇರಿಗೆ ಕೊಂಡೊಯ್ದಗ, ಸ್ಥಳೀಯ ಶಾಸಕರ ಪತ್ರದೊಂದಿಗೆ ರಾಜ್ಯ ಲಾಟರಿ ನಿರ್ದೇಶಕರಿಗೆ ಕಳುಹಿಸಿಕೊಡುವಂತೆ ಮಾಹಿತಿ ನೀಡಲಾಯಿತು. ಹರಿದ ಕಾರಣ, ಜಿಲ್ಲೆಯಲ್ಲಿ ಈ ನಂಬರ್ಗೆ ಹಣ ನೀಡಲಾಗದು. ಇದರ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮಾಡಿ, ರಾಜ್ಯ ಲಾಟರಿ ನಿರ್ದೇಶಕರ ಆದೇಶ ಲಭಿಸಿದರಷ್ಟೇ ಮೊತ್ತ ನೀಡಲು ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.