More

    ಶ್ರೀರಾಮನ ಮೇರು ವ್ಯಕ್ತಿತ್ವ ಸರ್ವರಿಗೂ ಮಾದರಿ

    ಶೃಂಗೇರಿ: ಶ್ರೀರಾಮನ ಜೀವನ ಪ್ರತಿಯೊಬ್ಬರಿಗೂ ಆದರ್ಶ. ಶ್ರೀರಾಮನು ಧರ್ಮದ ಪ್ರತಿರೂಪ. ಶ್ರೀರಾಮನ ಮೇರು ವ್ಯಕ್ತಿತ್ವ ಸರ್ವರಿಗೂ ಮಾದರಿ ಎಂದು ಶೃಂಗೇರಿ ಶ್ರೂ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.
    ತಾಲೂಕಿನ ಹೊಳೆಕೊಪ್ಪದ ಶ್ರೀ ರಾಮಚಂದ್ರಸ್ವಾಮಿ ವಿಗ್ರಹ ಪುನಃ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ನೆರವೇರಿಸಿ ಅನುಗ್ರಹ ಭಾಷಣಗೈದರು.
    ರಾಮಾಯಣದಲ್ಲಿ ಇರುವ ಪ್ರತಿಯೊಂದು ಘಟನೆಯು ನಾವು ಏನು ಮಾಡಬೇಕು?, ಏನು ಮಾಡಬಾರದು? ಎಂಬ ಪಾಠಗಳನ್ನು ಕಲಿಸಿಕೊಡುತ್ತದೆ. ಈ ಎರಡು ಪಾಠಗಳು ಮನುಷ್ಯನಿಗೆ ತೀರಾ ಅಗತ್ಯ. ಈ ಪಾಠಗಳನ್ನು ನಾವು ಜೀವನದಲ್ಲಿ ಆಚರಣೆಗೆ ತಂದಾಗ ಜೀವನಲ್ಲಿ ಉನ್ನತಿ ಕಾಣಲು ಸಾಧ್ಯವಾಗುತ್ತದೆ ಎಂದರು.
    ಮಕ್ಕಳು ಸತ್ಪ್ರಜೆಗಳಾಗಬೇಕಾದರೆ ರಾಮಾಯಣವನ್ನು ಅಧ್ಯಯನ ಮಾಡಬೇಕು. ರಾಮಾಯಾಣ ಕೇವಲ ವ್ಯಕ್ತಿ-ವ್ಯಕ್ತಿಗಳ ನಡುವೆ ನಡೆಯುವ ಹೋರಾಟವಲ್ಲ. ಅದು ಧರ್ಮ-ಅಧರ್ಮದ ನಡುವೆ ನಡೆಯುವ ಯುದ್ಧ. ಧರ್ಮಕ್ಕೆ ಜಯ, ಅಧರ್ಮಕ್ಕೆ ಅಪಜಯ ಎಂಬುದು ಶತಸಿದ್ಧ. ಲೋಕದಲ್ಲಿ ನಾವು ಪ್ರತಿಯೊಂದನ್ನು ಶುದ್ಧ ಮನಸ್ಸಿನಿಂದ ನೋಡಬೇಕು. ಕೆಟ್ಟ ದೃಷ್ಟಿಯಿಂದ ನೋಡಿದಾಗ ಸಮಾಜದ ಸಂಸ್ಕಾರ ಕುಂಠಿತಗೊಳ್ಳುತ್ತದೆ ಎಂಬುದು ರಾಮಾಯಣದ ಹಲವು ಘಟನೆಗಳು ಉಲ್ಲೇಖಿಸುತ್ತವೆ. ನಾಯಕರು ತಮಗಾಗಿ ದುಡಿಯುವವರ ಹಿತವನ್ನು ಕಾಪಾಡಬೇಕು ಎಂಬ ಆದರ್ಶ ತತ್ವವನ್ನು ಶ್ರೀರಾಮನ ಗುಣದಲ್ಲಿ ನಾವು ಕಾಣಬಹುದು. ತನಗಾಗಿ ಸೇವೆಗೈದ ವಾನರರ ಕುರಿತು ಶ್ರೀರಾಮನಿಗೆ ಇದ್ದ ಕಾಳಜಿ ಪ್ರಶಂಸನೀಯ ಎಂದರು.
    ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಆಶೋಕ್ ಹೆಗಡೆ, ಪ್ರಮುಖರಾದ ಶಿವಕುಮಾರ್, ರಾಘವೇಂದ್ರ, ಚೇತನ್ ಹೆಗಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts