ಬೆಳ್ತಂಗಡಿ: ಲಾಕ್ಡೌನ್ ಸಂದರ್ಭ ಸ್ವದೇಶಕ್ಕೆ ಹೋಗಲಾರದೆ ಭಾರತದಲ್ಲಿ ಸಿಲುಕಿಕೊಂಡ ಫ್ರೆಂಚ್ ನಾಗರಿಕರೊಬ್ಬರು ಕಾಲಹರಣ ಮಾಡದೆ ಕನ್ನಡ ಭಾಷೆ ಕಲಿಕೆಗೆ ಸದುಪಯೋಗ ಮಾಡಿಕೊಂಡು ಗಮನ ಸೆಳೆದಿದ್ದಾರೆ.
ಒಂದು ವಷರ್ದ ಪ್ರವಾಸಿ ವೀಸಾದಲ್ಲಿ ಭಾರತ ಪ್ರವಾಸಕ್ಕೆ ಬಂದ 25 ವರ್ಷದ ಬ್ಯಾಪ್ಟಿಸ್ಟ್ ಮರಿಯೊಟ್, ಬೆಳ್ತಂಗಡಿಯ ಮುಂಡಾಜೆ ಎಂಬ ಹಳ್ಳಿಯ ಬಾಡಿಗೆ ಕೋಣೆಯಲ್ಲಿ ಉಳಿದಿದ್ದರು. ಮಾರ್ಚ್ ಅಂತ್ಯದೊಳಗೆ ಅವರು ಮರಳಬೇಕಿತ್ತು. ಆ ಹೊತ್ತಿಗೆ ಲಾಕ್ಡೌನ್ ಜಾರಿಯಾಗಿದ್ದರಿಂದ ಬಾಕಿಯಾದರು. ಈ ಸಂದರ್ಭವನ್ನು ಅವರು ಬಳಸಿದ್ದು ಕನ್ನಡ ಭಾಷಾ ಕಲಿಕೆಗೆ. ಸಹಕಾರ ನೀಡಿದವರು ಮುಂಡಾಜೆಯ ಕೃಷಿಕರಾದ ಅಜಿತ್ ಭಿಡೆ ಹಾಗೂ ಸಚಿನ್ ಭಿಡೆ.
ಬ್ಯಾಪ್ಟಿಸ್ಟ್ ಮೂಲತಃ ಕಲಾವಿದ. ಫ್ರಾನ್ಸ್ನ ಫ್ಲೋರೆನ್ಸ್ ಅಕಾಡೆಮಿ ಆಫ್ ಆರ್ಟ್ಸ್ ವಿದ್ಯಾರ್ಥಿ. ಸ್ಪೈನ್ನ ಒಂದು ಕಲಾಶಾಲೆಯ ಶಿಕ್ಷಕ. ಸಮಯ ಸಿಕ್ಕಿದಾಗಲೆಲ್ಲ ಚಾರ್ಮಾಡಿ ಕಣಿವೆಯ (ಪಶ್ಚಿಮಘಟ್ಟ) ಮನಮೋಹಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಡ್ರಮ್ಸ್ ಕಲಾವಿದರೂ ಹೌದು. ಕನ್ನಡ ಕಲಿಯುತ್ತಿದ್ದಾಗ ಭಿಡೆಯವರ ಸ್ನೇಹಿತ ಧನುಷ್ ರಾಜೇಂದ್ರರಿಗೆ ಡ್ರಮ್ಸ್ ವಾದ್ಯ ಕಲಿಸುತ್ತಿದ್ದಾರೆ.
ಊರಿಗೆ ಹೋಗಲು ಮನಸ್ಸಿಲ್ಲ!
ಸ್ಯಾಕ್ಸೋಫೋನ್ ಕಲಾವಿದ ಮೈಕಲ್ ಮಿಷೆಲ್ ಎಂಬುವರಿಂದ ಮುಂಡಾಜೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. 2017ರಲ್ಲಿ ಮೊದಲ ಬಾರಿ ಭಾರತಕ್ಕೆ ಬಂದಾಗ ಹಿಂದಿ ಭಾಷೆೆ ಬಗ್ಗೆ ತಿಳಿದುಕೊಂಡೆ. ಹೆಚ್ಚಿನ ಭಾರತೀಯರು ಹಿಂದಿ ಮಾತನಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಮುಂಡಾಜೆಗೆ ಬಂದಾಗ ಕನ್ನಡದ ಮಹತ್ವ ತಿಳಿಯಿತು. ಹಾಗಾಗಿ ಕನ್ನಡ ಕಲಿಯಲಾರಂಭಿಸಿದ್ದೆ. ಲಾಕ್ಡೌನ್ ಘೋಷಣೆಯಾದಾಗ ಯಾವಾಗ ಹಿಂದಿರುಗುವೆನೋ ಎಂದುಕೊಂಡಿದ್ದೆ. ವಿಸ್ತರಣೆಯಾದಾಗ ಮತ್ತು ವಿಮಾನಯಾನ ರದ್ದಾದಾಗ ನನ್ನ ಕನ್ನಡ ಭಾಷಆ ಜ್ಞಾನ ವೃದ್ಧಿಸಲು ಅವಕಾಶ ಸಿಕ್ಕಿತು. ಈಗ ಇಲ್ಲಿಂದ ಹೊರಡಲು ಮನಸ್ಸಾಗುತ್ತಿಲ್ಲ ಎಂದು ಎಂದು ಮರಿಯೋಟ್ ಫ್ರೆಂಚ್ ಶೈಲಿಯ ಕನ್ನಡದಲ್ಲೇ ಹೇಳುತ್ತಾರೆ.