ಮಂಗಳೂರು/ಉಡುಪಿ: ಕರೊನಾ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಂಡೇ ಲಾಕ್ಡೌನ್ಗೆ ಕರಾವಳಿ ಜನರು ಸ್ಪಂದಿಸಿದ್ದಾರೆ.
ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜನರು ಮನೆಗಳಿಂದ ಹೊರಬರಲಿಲ್ಲ. ವಾಹನ ಸಂಚಾರ, ವ್ಯಾಪಾರ ಚಟುವಟಿಕೆಯೂ ಇರಲಿಲ್ಲ. ಆದರೆ, ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆ ಆಗಲಿಲ್ಲ. ಆಸ್ಪತ್ರೆ, ಕ್ಲಿನಿಕ್, ಮೆಡಿಕಲ್, ಪೆಟ್ರೋಲ್ ಬಂಕ್, ಹಾಲಿನ ಅಂಗಡಿ ಹೊರತು ಪಡಿಸಿ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.
ಹೆದ್ದಾರಿಯಲ್ಲಿ ಸರಕು ಸಾಗಾಟ ವಾಹನ ಹೊರತುಪಡಿಸಿ, ಇತರ ವಾಹನಗಳು ಕಂಡುಬರಲಿಲ್ಲ. ಖಾಸಗಿ, ಕೆಎಸ್ಆರ್ಟಿಸಿ ಬಸ್ಸುಗಳು ರಸ್ತೆಗಿಳಿಯಲಿಲ್ಲ. ಆಟೋ ಸಂಚರಿಸಲಿಲ್ಲ. ಜಿಲ್ಲಾಡಳಿತ ಮುಂಚಿತವಾಗಿ ಅನುಮತಿ ನೀಡಿದ್ದ ವಿವಾಹ, ಮತ್ತಿತರ ಸಣ್ಣಪುಟ್ಟ ಸಮಾರಂಭಗಳು ನಡೆದಿವೆ. ಹೊಟೆಲ್ಗಳಲ್ಲಿ ಪಾರ್ಸೆಲ್ ಸೇವೆಯನ್ನೂ ಬಂದ್ ಮಾಡಲಾಗಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ಅಲ್ಲಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ತಾತ್ಕಾಲಿಕ ಚೆಕ್ಪೋಸ್ಟ್ಗಳನ್ನು ಹಾಕಲಾಗಿತ್ತು.
ಶನಿವಾರವೇ ಸಿದ್ಧತೆ ಮಾಡಿಕೊಂಡಿದ್ದ ಜನರು
ಸಾರ್ವಜನಿಕರು ಅವಶ್ಯ ಸಾಮಗ್ರಿಗಳನ್ನು ಶನಿವಾರವೇ ಖರೀದಿಸಿದ್ದರು. ಹೆಚ್ಚಿನ ಮಂದಿ ಹಾಲನ್ನೂ ಖರೀದಿಸಿಟ್ಟುಕೊಂಡಿದ್ದು, ಭಾನು ವಾರ ಹಾಲು ಖರೀದಿ ಎಂದಿಗಿಂತ ಕಡಿಮೆಯಾಗಿತ್ತು ಎಂದು ಮಂಗಳೂರಿನ ನಂದಿನಿ ಹಾಲಿನ ಬೂತ್ ವ್ಯಾಪಾರಿ ಸಂತೋಷ್ ತಿಳಿಸಿದ್ದಾರೆ. ಸಾರ್ವಜನಿಕರು ಮನೆಯಲ್ಲೇ ಉಳಿದು ಲಾಕ್ಡೌನ್ಗೆ ಬೆಂಬಲ ನೀಡಿದರೆ, ಪೌರ ಕಾರ್ಮಿಕರು ನಗರದ ಶುಚಿತ್ವ ಹಾಗೂ ಪೊಲೀಸರು ಬಂದೋಬಸ್ತ್ ಕರ್ತವ್ಯದಲ್ಲಿ ತೊಡಿಸಿಕೊಂಡಿದ್ದರು.