ದೇಶಾದ್ಯಂತ ಲಾಕ್ಡೌನ್ ಏಪ್ರಿಲ್ 14ರ ನಂತರ ಮುಂದುವರಿಯುತ್ತೋ ಇಲ್ಲವೋ ಎಂಬುದನ್ನು ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ, ಲಾಕ್ಡೌನ್ ತೆರವಾದ ಬಳಿಕ ಹಂತಹಂತವಾಗಿ ರೈಲು ಸಂಚಾರವನ್ನು ಪುನಾರಂಭಿಸಲು ಈಗಾಗಲೇ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ.
ಮಾರ್ಚ್ 22ರಂದು ದೇಶಾದ್ಯಂತ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಅದಾಗಲೇ ಹೊರಟಿದ್ದ ರೈಲುಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಏಪ್ರಿಲ್ 14ರ ನಂತರ ರೈಲುಗಳ ಸಂಚಾರ ಮರು ಆರಂಭಕ್ಕಾಗಿ ರೈಲ್ವೆ ಮಂಡಳಿ ಸಭೆ ನಡೆಸಿದೆ. ಹಂತಹಂತವಾಗಿ ಸಂಚಾರ ಆರಂಭಿಸಲು ಯೋಜನೆ ರೂಪಿಸಿ ಸಲ್ಲಿಸುವಂತೆ ವಲಯ ಕಚೇರಿಗಳಿಗೆ ಸೂಚಿಸಿದೆ.
ಮಂಡಳಿಯು ವಲಯಗಳ ಸನ್ನದ್ಧತೆಯನ್ನು ಪರಿಶೀಲನೆ ಮಾಡಲಿದೆ. ಹೀಗಾಗಿ ಸಂಚಾರ ಪುನಾರಂಭಕ್ಕೆ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದೆ ಎಂದು ವಲಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ಶೇ.25, ಪ್ರಮಾಣದಲ್ಲಿ ಶೇ.50ಕ್ಕೆ ಹೆಚ್ಚಿಸಿ ಸೇವೆ ಆರಂಭಿಸಲು ಸೂಚಿಸಬಹುದು. ಇದು ಏಪ್ರಿಲ್ 14ರ ನಂತರದ ಪರಿಸ್ಥಿತಿ ಅವಲಂಬಿಸಿದೆ ಎಂದು ತಿಳಿಸಿದ್ದಾರೆ.
ಇನ್ನೊಂದು ಮೂಲದ ಪ್ರಕಾರ ಲಾಕ್ಡೌನ್ ಸ್ಥಗಿತದ ಬಳಿಕ ಶೇ.100 ಸೇವೆಗಳು ಒಮ್ಮೆಲೆ ಆರಂಭವಾಗುವ ಸೂಚನೆಗಳಿಲ್ಲ. ಏಕೆಂದರೆ, ಇದಕ್ಕಾಗಿ 13,000 ರೈಲುಗಳ ಸಂಚಾರ ಒಮ್ಮೆಲೆ ಶುರು ಮಾಡಬೇಕಾಗುತ್ತದೆ. ಇದಲ್ಲದೇ. ಲಾಕ್ಡೌನ್ ಬಳಿಕ ಜನರು ಏಕಾಏಕಿ ರಸ್ತೆಗೆ ಇಳಿಯದಂತೆ ಅಥವಾ ಒಟ್ಟಾಗಿ ಸೇರದಂತೆ ನೋಡಿಕೊಳ್ಳಬೇಕಿದೆ ಎಂದು ಪ್ರಧಾನಿ ಮೋದಿ ಕೂಡ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.
ಇದಲ್ಲದೇ, ಕೆಲ ರಾಜ್ಯಗಳಲ್ಲಿ ಕೆಲಮಟ್ಟಿನ ಲಾಕ್ಡೌನ್ ಜಾರಿಯಲ್ಲಿರುವಂತೆಯೇ ರೈಲು ಸಂಚಾರ ಪುನಾರಂಭಿಸಬೇಕಾದರೆ ಅಗತ್ಯ ಮಾನವ ಸಂಪನ್ಮೂಲ ಹಾಗೂ ಸಿಬ್ಬಂದಿ ಹೊಂದಿಸುವುದು ಕೂಡ ಸವಾಲಾಗಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.
ಯಾವುದೇ ಮಾರ್ಗದಲ್ಲಿ ಸಂಚಾರ ಆರಂಭವಾದರೂ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರಲಿದೆ ಎಂಬುದಂತೂ ಸತ್ಯ. ಯಾವುದೇ ಪರಿಸ್ಥಿತಿಗೂ ರೈಲ್ವೆ ಇಲಾಖೆ ಸನ್ನದ್ಧವಾಗಿರಲಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)