ಲಿಂಗಸುಗೂರು: ತಾಲೂಕಿನ ರೋಡಲಬಂಡಾ (ಯುಕೆಪಿ) ಗ್ರಾಪಂ ಮಾಜಿ ಅಧ್ಯಕ್ಷ ಅಮರೇಶ ಸಂಗಪ್ಪ ಮೇಟಿರನ್ನು ಅಪಹರಣ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು 10 ಜನರ ವಿರುದ್ಧ ಬಾಗಲಕೋಟೆ ಜಿಲ್ಲೆ ಬೀಳಗಿ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಅಮರೇಶ ಮೇಟಿ ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ್ದರು. ತೆರವಾದ ಸ್ಥಾನಕ್ಕೆ ಚುನಾವಣೆ ನಿಗದಿಯಾಗುವ ಮುನ್ನವೇ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಸದಸ್ಯರು ಪ್ರವಾಸಕ್ಕೆ ತೆರಳಿದ್ದರು ಎಂದು ಹೇಳಲಾಗುತ್ತಿದೆ. ಬೀಳಗಿಯ ಲಾಡ್ಜ್ನಲ್ಲಿ ಅಮರೇಶ ಮೇಟಿ ಇರುವ ಮಾಹಿತಿ ತಿಳಿದು ಜೂ.21 ರಂದು ರಾತ್ರಿ ಅಪಹರಿಸಲಾಗಿದ್ದು, ಈ ಕುರಿತ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಗ್ರಾಪಂ ಅಧ್ಯಕ್ಷ ಅಧಿಕಾರ ಅವಧಿ ತಲಾ 15 ತಿಂಗಳು ಹಂಚಿಕೆ ಬಗ್ಗೆ ಒಪ್ಪಂದವಾಗಿತ್ತು. ಈ ಪ್ರಕಾರ ಅಮರೇಶ ಮೇಟಿ ಅಧ್ಯಕ್ಷರಾಗಿ 15 ತಿಂಗಳು ಅಧಿಕಾರ ನಡೆಸಿ ರಾಜೀನಾಮೆ ನೀಡಿದ್ದರು. ಈ ಹಿಂದೆ ಕಾಂಗ್ರೆಸ್ ಬೆಂಬಲಿತರಾಗಿದ್ದ ಅಮರೇಶ ಮೇಟಿ ಇತ್ತೀಚೆಗೆ ಮತ್ತೋರ್ವ ಸದಸ್ಯನೊಂದಿಗೆ ಬಿಜೆಪಿ ಸೇರಿದ್ದರೆಂದು ಹೇಳಲಾಗುತ್ತಿದೆ. ಗ್ರಾಪಂನ ಕೆಲ ಸದಸ್ಯರೊಡನೆ ಪ್ರವಾಸಕ್ಕೆ ತೆರಳಿದ್ದಾಗ ಅಮರೇಶ ಮೇಟಿ ಅಪಹರಣ ನಡೆದಿದೆ. ಈ ಕುರಿತು ಅಮರೇಶ ಮೇಟಿ ಸಂಬಂಧಿ ನಿಂಗಪ್ಪ ಮೇಟಿ ಬೀಳಗಿ ಠಾಣೆಯಲ್ಲಿ 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.