ಉಡುಪಿ: ಜಿಲ್ಲೆಯಲ್ಲಿ ಗುರುವಾರ ತಡರಾತ್ರಿಯಿಂದ ಶುಕ್ರವಾರ ಮುಂಜಾನೆವರೆಗೂ ಧಾರಾಕಾರ ಮಳೆಯಾಗಿದ್ದು, ಪರ್ಕಳದಲ್ಲಿ ಸಿಡಿಲು ಆಘಾತದಿಂದ ತಂದೆ ಮತ್ತು ಮಗ ಗಾಯಗೊಂಡಿದ್ದಾರೆ. ಪರ್ಕಳ ಪರೀಕದ ಮನೆ ಸಮೀಪ ಬೆಳಗ್ಗೆ 8.30ರ ಸಮಯದಲ್ಲಿ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸೋಮನಾಥ ಹೆಗ್ಡೆ ಮತ್ತು ಅವರ ಪುತ್ರನಿಗೆ ಸಿಡಿಲು ಬಡಿದಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.