ನವದೆಹಲಿ: ಎಲ್ಐಸಿಯ ಷೇರುಗಳನ್ನು ಖಾಸಗಿಗೆ ಮಾರಾಟ ಮಾರಾಟ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದ ಹಿನ್ನೆಲೆಯಲ್ಲಿ ಲೈಫ್ ಇನ್ಸೂರೆನ್ಸ್ ಕಾರ್ಪೂರೇಷನ್ ಇಂಡಿಯಾದ ಸಿಬ್ಬಂದಿ ಮಂಗಳವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಮುಂದಿನ ಹಣಕಾಸು ವರ್ಷದಲ್ಲಿ ನಿಗದಿಪಡಿಸಿದ 2.1 ಲಕ್ಷ ಕೋಟಿ ರೂ.ಗಳ ಹೂಡಿಕೆ ಗುರಿಯನ್ನು ತಲುಪಲು ಎಲ್ಐಸಿಯ ಪಾಲು ಮಾರಾಟ ಮಾಡಲಾಗುವುದು ಎಂದು ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಎಲ್ಐಸಿಯ ಷೇರುಗಳನ್ನು ಮಾರಾಟ ಮಾಡುವುದರ ಜೊತೆಗೆ, ಐಡಿಬಿಐ ಬ್ಯಾಂಕಿನ ಸಂಪೂರ್ಣ ಪಾಲನ್ನು ಮಾರಾಟ ಮಾಡುವುದಾಗಿಯೂ ಸೀತಾರಾಮನ್ ಘೋಷಿಸಿದ್ದರು.
ಇಂದು (ಫೆ.4, ಮಂಗಳವಾರ) ಮಧ್ಯಾಹ್ನ 12.15ರಿಂದ 1.15ರವರೆಗೆ ರಾಷ್ಟ್ರವ್ಯಾಪಿ ಪ್ರತಿಭಡನೆ ನಡೆಸಲಿದ್ದೇವೆ. ಕಚೇರಿಯಲ್ಲಿ ಪ್ರತಿಭಟನೆ ಆರಂಭಿಸಿ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಿದ್ದೇವೆ. ನಂತರ ಎಲ್ಲ ಸಂಸದರ ಬಳಿಗೂ ತೆರಳಲಿದ್ದೇವೆ ಎಂದು ಎಲ್ಐಸಿ ಕೋಲ್ಕತ್ತ ವಿಭಾಗದ ಉಪಾಧ್ಯಕ್ಷ ಪ್ರದೀಪ್ ಮುಖರ್ಜಿ ತಿಳಿಸಿದ್ದಾರೆ.
ಎಲ್ಐಸಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನೂ ಮೀರಿ ದೊಡ್ಡದಾದ ಹಣಕಾಸು ನಿಗಮ. ಇಂತಹ ಎಲ್ಐಸಿಯ ಷೇರು ಮಾರಾಟ ರಾಷ್ಟ್ರ ವಿರೋಧಿ ನಡೆ ಎಂದು ಅವರು ಅಭಿಪ್ರಾಯ ಪಟ್ಟರು. (ಏಜೆನ್ಸೀಸ್)