ಚಿತ್ರದುರ್ಗ: ಕನಿಷ್ಠ ವೇತನ ಜಾರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಗ್ರಾಪಂ ಗ್ರಂಥಾಲಯಗಳ ಮೇಲ್ವಿಚಾರಕರು ಫೆ. 13 ರಿಂದ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನಾರಂಭಿಸಲಿದ್ದಾರೆ ಎಂದು ರಾಜ್ಯ ಸರ್ಕಾರಿ ಗ್ರಾಮೀಣ ಗ್ರಂಥಾಲಯಗಳ ನೌಕರರ ಸಂಘದ ಅಧ್ಯಕ್ಷ ಕೆ.ವಿ.ಸತ್ಯನಾರಾಯಣ ತಿಳಿಸಿದ್ದಾರೆ.
ರಾಜ್ಯದ ಗ್ರಾಪಂ ಗ್ರಂಥಾಲಯಗಳಲ್ಲಿ ಕಳೆದ 33 ವರ್ಷಗಳಿಂದ ಯಾವುದೇ ಸವಲತ್ತುಗಳು ಇಲ್ಲದೆ ಅಲ್ಪ ವೇತನದಲ್ಲಿ ಕರ್ತವ್ಯ ನಿರ್ವ ಹಿಸುತ್ತಾ ಬಂದಿದ್ದೇವೆ. ಒಂದು ಸಾವಿರಕ್ಕೂ ಹೆಚ್ಚು ನೌಕರರು ನಿವೃತ್ತಿ ಮತ್ತು ನಿವೃತ್ತಿ ಅಂಚಿನಲ್ಲಿದ್ದು,ಮೇಲ್ವಿಚಾಕರ ಕುಟುಂಬ ವರ್ಗದ ವರು ಕಷ್ಟ ಮತ್ತು ಆತಂಕದ ಪರಿಸ್ಥಿತಿಯಲ್ಲಿದ್ದಾರೆ.
ಕಳೆದ ಏಪ್ರಿಲ್ 21ರಂದು ಹೈಕೋರ್ಟ್,ಕಾರ್ಮಿಕ ಇಲಾಖೆಯ ಹೊರಡಿಸಿರುವ ಕನಿಷ್ಠ ವೇತನದ ಅಧಿಸೂಚನೆಯನ್ನು ಊರ್ಜಿತ ಗೊಳಿಸಿದ್ದರೂ ಈವರೆಗೂ ರಾಜ್ಯಸರ್ಕಾರ ಕನಿಷ್ಠ ವೇತನ ಕೊಟ್ಟಿಲ್ಲ. ಇದಕ್ಕಾಗಿ ಸಲ್ಲಿಸಿದ ಅನೇಕ ಮನವಿಗಳಿಂದ ಪ್ರಯೋಜನವಾಗಿಲ್ಲ. ಆದ್ದ ರಿಂದ ಕನಿಷ್ಠ ವೇತನ ಜಾರಿ,ಗ್ರಾಚ್ಯುಟಿ,ಅಕಾಲಿಕ ಮರಣ ಹೊಂದಿದ ಮೇಲ್ವಿಚಾರಕರ ಕುಟುಂಬ ವರ್ಗದವರಿಗೆ ನೌಕರಿ ಕೊಡಲು ವಯೋಮಿತಿ ಮತ್ತು ವಿದ್ಯಾಭ್ಯಾಸವನ್ನು ಸಡಿಲಿಸ ಬೇಕು.
ಕಾಲಕಾಲಕ್ಕೆ ವೇತನ ಪಾವತಿ, ಮೇಲ್ವಿಚಾರಕರಿಗೆ ಗ್ರಾಪಂಗಳಲ್ಲಿ ಆಗುತ್ತಿರುವ ಕಿರುಕುಳದ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಹಾಗೂ ಬಯೋಮೆಟ್ರಿಕ್ ಪದ್ಧತಿ ಗೊಂದಲಗಳನ್ನು ಸರಿಪಡಿಸ ಬೇಕೆಂದು ಆಗ್ರಹಿಸಿ ಮುಷ್ಕರ ನಡೆಸಲಾಗುತ್ತಿದೆ ಎಂದು ಸತ್ಯನಾರಾಯಣ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.
—–