ಹಾಸನ: ಶಕ್ತಿದೇವತೆ ಹಾಸನಾಂಬೆಯ ಮೇಲೆ ನಂಬಿಕೆಯಿಟ್ಟಿರುವ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ವಿಚಿತ್ರ ಬೇಡಿಕೆಗಳನ್ನು ಪತ್ರಗಳ ಮೂಲಕ ತಾಯಿಗೆ ಸಲ್ಲಿಸಿದ್ದಾರೆ. ಸಿದ್ದೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿಕೊಂಡಿದ್ದ ಹುಂಡಿ ಎಣಿಕೆ ವೇಳೆ 40 ಪತ್ರಗಳು ಸಿಕ್ಕಿವೆ.
‘ನನಗೆ ನನ್ನ ಹೆಂಡತಿ ಮಕ್ಕಳು ಬೇಕು, ನಿನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದು ನೀನೇ ನಮ್ಮನ್ನು ಒಂದುಗೂಡಿಸು. ನಾನು ನಿನ್ನ ಪರಮ ಭಕ್ತ. ನಾನು ಕುಡುಕ ಎಂಬ ಕಾರಣಕ್ಕೆ ಹೆಂಡತಿ ಮನೆಗೆ ಬರುತ್ತಿಲ್ಲ, ಈಗ ಪ್ರಮಾಣ ಮಾಡುತ್ತೇನೆ, ಇನ್ಮುಂದೆ ಬೆಳಗ್ಗೆ- ಮಧ್ಯಾಹ್ನ ಕುಡಿಯುವುದಿಲ್ಲ. ಅರಿವಿಲ್ಲದೆ ಸಂಜೆ ವೇಳೆ ಸ್ವಲ್ಪ ಸ್ವಲ್ಪ ಕುಡಿದರೆ ಕ್ಷಮಿಸು ತಾಯಿ. ನನಗೆ ಆಶೀರ್ವಾದ ಮಾಡು ತಾಯಿ, ಮುಂದಿನ ವರ್ಷ ಕುಟುಂಬ ಸಮೇತ ಬಂದು ನಿನ್ನ ದರ್ಶನ ಮಾಡುತ್ತೇವೆ… ಎಂದು ಭಕ್ತನೊಬ್ಬ ಪತ್ರದ ಮೂಲಕ ಬೇಡಿಕೊಂಡಿದ್ದಾನೆ. ‘ಶಕ್ತಿದೇವತೆ ಹಾಸನಾಂಬೆ ಅಪ್ಪನ ಸಾಲ ತೀರಿಸಲು ಸಹಕರಿಸು, ನನಗೆ ಪಿಡಿಒ ಕೆಲಸ ಕೊಡಿಸು, ಜತೆಗೆ ಸ್ವತಂತ್ರವಾಗಿ ಬದುಕಲು ಅವಕಾಶ ಮಾಡಿಕೊಡು ತಾಯಿ’ ಎಂದು ಇನ್ನೊಬ್ಬ ಭಕ್ತ ಬೇಡಿಕೊಂಡಿದ್ದಾನೆ.
ಮತ್ತೊಬ್ಬರು ಬರೆದಿರುವ ಪತ್ರದ ಸಾಲುಗಳು ಹೀಗಿವೆ, “ಈ ಬಾರಿ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರನ್ನು ನಿಷೇಧಿಸಿ ಕೇವಲ ವಿಐಪಿಗಳಿಗೆ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತ ಮಾಡಿರುವ ಅನ್ಯಾಯದಿಂದ ಸಾಮಾನ್ಯರಿಗೆ ಭಾರಿ ಕಷ್ಟವಾಗಿದೆ ತಾಯಿ’ ಎಂದು ಹಾಸನಾಂಬೆಗೆ ಪತ್ರ ಬರೆದಿದ್ದಾನೆ.
‘ನನಗೆ ಬೆಂಗಳೂರಿನಲ್ಲಿ ಕೆಲಸ ಕೊಡಿಸು ಹಾಸನಾಂಬೆ, ಮುಂದಿನ ವರ್ಷ ಬಂದು ದರ್ಶನ ಪಡೆಯುತ್ತೇನೆ’. ‘ನನ್ನ ನೌಕರಿ ಕಾಯಂ ಆಗುವಂತೆ ಮಾಡು ಹಾಸನಾಂಬೆ’ ಎಂದು ಮತ್ತೊಬ್ಬರು ಕೇಳಿಕೊಂಡಿದ್ದಾರೆ.
ಹಾಸನಾಂಬೆ ದೇವಾಲಯದಲ್ಲಿ ಈ ಬಾರಿ 22,79,720 ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ 3,18,59,340 ರೂ. ಸಂಗ್ರಹವಾಗಿತ್ತು.
ಶೋಭಾ ಕೊಟ್ಟ ವಿಶೇಷ ಉಡುಗೊರೆಗೆ ರಾಷ್ಟ್ರ ನಾಯಕಿಯರು ಫಿದಾ! ಆ ಸರ್ಪ್ರೈಸ್ ಗಿಫ್ಟ್ ಕರ್ನಾಟಕದ್ದು…
ಸಿಎಂ ಆದೇಶಕ್ಕೆ ಭುಗಿಲೆದ್ದ ಅಸಮಾಧಾನ, ಒಕ್ಕಲಿಗರಿಂದಲೂ ಬಂತು ಡಿಮಾಂಡ್ !