ಕೋಲಾರ: ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವವಹಿಸುವುದರಿಂದ ಮಾನಸಿಕ ವಿಕಾಸ ಉಂಟಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಅಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಸುನಿಲ ಎಸ್. ಹೊಸಮನಿ ತಿಳಿಸಿದರು.
ನಗರದ ಸುವರ್ಣ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಖ್ಯಾತ ವಿಜ್ಞಾನಿ ಸರ್ ಸಿ.ವಿ. ರಾಮನ್ ಜನ್ಮದಿನ ಅಂಗವಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತಿದ್ದೇವೆ. ಮಕ್ಕಳ ಹಬ್ಬದೊಂದಿಗೆ ವಿಜ್ಞಾನ ದಿನವೂ ಬೆಸೆದುಕೊಂಡಿರುವುದು ಸಂತಸ ತಂದಿದೆ ಎಂದರು.
ಭ್ರೂಣಾವಸ್ಥೆ ಇರುವಾಗಲೇ ಅದರ ರಕ್ಷಣೆ ಹಾಗೂ ಪೋಷಣೆಗಾಗಿ ಸರ್ಕಾರಗಳು ಹಲವು ಕಾಯ್ದೆ ಜಾರಿಗೆ ತಂದಿವೆ. ಮಕ್ಕಳಿಗಾಗಿ ಹಲವು ಕಾನೂನು ಜತೆಗೆ ಹಕ್ಕುಗಳನ್ನು ಸಂವಿಧಾನ ನೀಡಿದೆ. ಇದರ ಬಗ್ಗೆ ಪ್ರತಿಯೊಂದು ಮಗು
ಅರಿಯಬೇಕಿದೆ ಎಂದರು.
ಬಾಲವಿಕಾಸ ಅಕಾಡೆಮಿ ಸದಸ್ಯ ಪಿಚ್ಚಳ್ಳಿ ಶ್ರೀನಿವಾಸ್ ಮಾತನಾಡಿ, ಪಾಲಕರು ಮಕ್ಕಳನ್ನು ಪ್ರಕೃತಿಯೊಂದಿಗೆ ಬೆರೆತು ಕಲಿಯುವ ಅವಕಾಶ ಕಲ್ಪಿಸಬೇಕು. ಹಳ್ಳಿಯ ಜೀವನಶೈಲಿ ಪರಿಚಯ ಮಾಡಿಕೊಡಬೇಕು. ಇತ್ತೀಚಿಗೆ ನಾಗರಿಕತೆ ಹೆಸರಿನಿಂದ ಜನಜೀವನದಿಂದ ಮಕ್ಕಳನ್ನು ದೂರಮಾಡುತ್ತಿದ್ದೇವೆ. ಮಕ್ಕಳು ಸಂಸ್ಕೃತಿಗೆ ಹತ್ತಿರವಾಗಿ ಬೆಳೆಯಬೇಕು ಎಂದರು.
ಮಕ್ಕಳ ಸಮಿತಿ ಅಧ್ಯಕ್ಷ ಚೌಡಪ್ಪ, ಬಾಲವಿಕಾಸ ಸಮಿತಿ ಸದಸ್ಯೆ ಮಂಜುಳಾ ಭೀಮರಾವ್, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕ ಎಂ.ನಾರಾಯಣಸ್ವಾಮಿ, ಜಿಲ್ಲಾ ನಿರೂಪಣಾಧಿಕಾರಿ ವಂಶಿಕೃಷ್ಣ, ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ಉಪಸ್ಥಿತರಿದ್ದರು.