ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ಇಲಿ ಜ್ವರಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲ, ಈ ರೋಗದ ನಿಯಂತ್ರಣಕ್ಕೆ ಸುತ್ತಮುತ್ತಲಿನ ಪರಿಸರದ ನೈರ್ಮಲ್ಯ ಅತಿ ಅಗತ್ಯವಾಗಿದೆ ಎಂದು ಹಿರಿಯ ಆರೋಗ್ಯ ಮೇಲ್ವಿಚಾರಣಾಧಿಕಾರಿ ಆಂಜನೇಯ ಹೇಳಿದರು.
ಆರೋಗ್ಯ ಇಲಾಖೆ ಎನ್ಎಚ್ಎಂ ಯೋಜನೆಯಡಿ ಐಯ್ಯನಹಳ್ಳಿಯಲ್ಲಿ ಬುಧವಾರ ಏರ್ಪಡಿಸಿದ್ದ ಇಲಿ ಜ್ವರ ಕುರಿತ ಸಮರ್ಥನಾ ಸಭೆಯಲ್ಲಿ ಮಾತನಾಡಿ, ಇಲಿ ಜ್ವರ ಹರಡುವಿಕೆ ತಡೆಯಲು ಜ್ವರದಿಂದ ಬಳಲುತ್ತಿರುವ ಪ್ರಾಣಿಗಳ ಸಂಪರ್ಕದಿಂದ ದೂರವಿರುವುದು ಮುಖ್ಯ ಎಂದರು.
ಅಳಿಲು ಸೇರಿ ಇತರೆ ಇಲಿ ಜಾತಿ ಪ್ರಾಣಿಗಳಿಂದ ದೇಹದ ಮೇಲೆ ಗೀರು ಉಂಟಾದರೆ ನಂಜು ನಿರೋಧಕ ಲೇಪಿಸಿ ಸ್ವಚ್ಛ ಗೊಳಿಸಬೇಕು. ಪ್ರಾಣಿ ನಿರ್ವಾಹಕರು, ಪ್ರಯೋಗಾಲಯ ಸಿಬ್ಬಂದಿ, ನೈರ್ಮಲ್ಯ ಮತ್ತು ಒಳಚರಂಡಿ ಕೆಲಸಗಾರರು ವಿಶೇಷ ಮುನ್ನೆಚ್ಚರಿಕೆ ವಹಿಸಬೇಕು. ಸತ್ತ ಅಥವಾ ಜೀವಂತ ಇಲಿ ಜಾತಿಯ ಪ್ರಾಣಿಗಳನ್ನು ಮುಟ್ಟಬಾರದು ಎಂದು ಹೇಳಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಪರಿಸರ ನೈರ್ಮಲ್ಯದ ಕೊರತೆ, ನೆರೆಹಾವಳಿ ಇಲಿ ಜ್ವರ ಹರಡಲು ಮುಖ್ಯ ಕಾರಣವಾಗಿದೆ. ರೋಗಾಣು ಪ್ರವೇಶಿಸಿದ 2ರಿಂದ 25 ದಿನಗಳಲ್ಲಿ ತೀವ್ರ ತರದ ಜ್ವರ ಕಾಡಲಿದ್ದು, ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಇಲಿ ಜ್ವರ ನಿಯಂತ್ರಣ ಕರಪತ್ರವನ್ನು ಗ್ರಾಪಂ ಅಧ್ಯಕ್ಷೆ ಎಂ.ವೀಣಾ ಬಿಡುಗಡೆ ಮಾಡಿದರು. ಸದಸ್ಯೆ ಆಶಾ, ಪಿಡಿಒ ಶ್ರುತಿ, ರೂಪಾ, ದಾಸಪ್ಪ, ಶ್ರೀಧರ್ ಮತ್ತಿತರರು ಇದ್ದರು. ಗ್ರಾಮ ಆರೋಗ್ಯ ಅಮೃತ ಯೋಜನೆ ಬಗ್ಗೆ ತರಬೇತಿ ನೀಡಲಾಯಿತು.