ಗಜೇಂದ್ರಗಡ: ತಾಲೂಕಿನ ಜಿಗೇರಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಜಿಗೇರಿ ಗ್ರಾಮದ ಉದಯಕುಮಾರ ಶರಣಪ್ಪ ನೀಡಶೆಸಿ (18) ಗಾಯಗೊಂಡ ಯುವಕ.
ಬೇರೆಯವರ ಹೊಲದಲ್ಲಿ ಬಾಳೆ ಗೊನೆ ಕೀಳಲು ಹೋದಾಗ ಬುಧವಾರ ಬೆಳಗ್ಗೆ 10.45 ಗಂಟೆ ಸುಮಾರಿಗೆ ಚಿರತೆ ದಾಳಿ ಮಾಡಿದೆ. ಸಹೋದ್ಯೋಗಿ ಮಂಜುನಾಥ ಅವರು ಚೀರಾಟ ನಡೆಸಿ, ಕಲ್ಲು ಎಸೆದ ಪರಿಣಾಮ ಚಿರತೆ ಓಡಿ ಹೋಗಿದೆ.
ಯಾವುದೇ ರೀತಿಯ ಪ್ರಣಾಪಾಯವಾಗಿಲ್ಲ. ಯುವಕನನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅನಿಲಕುಮಾರ ತೋಟದ ತಿಳಿಸಿದ್ದಾರೆ.
ತಾಲೂಕಿನ ಅನೇಕ ಗ್ರಾಮಗಳಲ್ಲಿ ಜಾನುವಾರು ಹಾಗೂ ನಾಯಿಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಈಗ ಮನುಷ್ಯರ ಮೇಲೆ ದಾಳಿ ಮಾಡಿರುವುದು ತಾಲೂಕಿನ ಜನತೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆಲ್ಲ ಅರಣ್ಯ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ಜಿಗೇರಿ ಗ್ರಾಮಸ್ಥರು ಆರೋಪಿಸಿದ್ದಾರೆ.
ನಮ್ಮ ಜಮೀನುಗಳು ಗುಡ್ಡದ ಭಾಗದಲ್ಲಿವೆ. ಚಿರತೆ ಹಾವಳಿಯಿಂದ ಭಯಭೀತರಾಗಿದ್ದೇವೆ. ಕಾಡುಪ್ರಾಣಿಗಳ ದಾಳಿಯಿಂದ ರಕ್ಷಣೆ ಪಡೆಯಲು ಬಂದೂಕು ಪರವಾನಗಿಗೆ ಅರ್ಜಿ ಕೊಟ್ಟರೂ ಅದನ್ನು ತಿರಸ್ಕೃರಿಸುತ್ತಿದ್ದಾರೆ. ಗುಡ್ಡಗಾಡುಗಳಲ್ಲಿ ವಾಸಿಸುವ ನಮಗೆ ಬಂದೂಕು ಹೊಂದಲು ಪರವಾನಗಿ ನೀಡಬೇಕು. – | ಅಶೋಕ ಮಾಳೋತ್ತರ, ವದೇಗೋಳ ಸರಹದ್ದಿನ ಗುಡ್ಡಗಾಡು ನಿವಾಸಿ