ಚಿತ್ರದುರ್ಗ: ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ನೀತಿ ಸಂಹಿತೆ ಪಾಲನೆಯ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಲು ಚುನಾವಣಾ ಆಯೋಗ ಮುಂದಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಡಿಸಿ ಜಿಆರ್ಜೆ ದಿವ್ಯಾಪ್ರಭು ಅವರು ವಿಧಾನಸಭೆ ಕ್ಷೇತ್ರ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸಿ, ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಸಮರ್ಪಕವಾಗಿರಬೇಕೆಂದು ಸಲಹೆ ನೀಡಿದರು.
ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಆಕಾಂಕ್ಷಿಗಳು ಈಗಾಗಲೇ ಚುನಾವಣೆ ಪ್ರಚಾರ ಪ್ರಾರಂಭಿಸಿದ್ದಾರೆ. ಸಭೆ, ಸಮಾರಂಭ, ಹೆಲಿಕಾಪ್ಟರ್ ಬಳಕೆ ಅನುಮತಿಗೂ ಚಾಲನೆ ಸಿಕ್ಕಿದೆ.
ಸುವಿಧಾ ತಂತ್ರಾಂಶದ ಮೂಲಕವೇ ಅನುಮತಿ ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರಮುಖರಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಅನುಮತಿ ವೇಳೆ ಕ್ಷೇತ್ರ ಚುನಾವಣಾಧಿಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಯೊಂದಿಗೆ ನಿಷ್ಪಕ್ಷಪಾತವಾಗಿ ಕ್ರಮ ವಹಿಸಬೇಕು. ಸ್ಟಾರ್ ಪ್ರಚಾರಕರ ಕಾರ್ಯಕ್ರಮಗಳಿಗೆ ವೆಚ್ಚವನ್ನು ಪಕ್ಷ ಅಥವಾ ಅಭ್ಯರ್ಥಿಗೆ ನಮೂದಿಸಬೇಕು ಎಂದರು.
ಇದನ್ನೂ ಓದಿ- https://www.vijayavani.net/dc-divya-prabhu-warns-of-criminal-case-if-lured/
ಎಸ್ಪಿ ಕೆ.ಪರಶುರಾಮ್ ಅವರು ಮಾತನಾಡಿ, ಸಭೆ, ಸಮಾರಂಭಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಕಾನೂ ನು ಸುವ್ಯವಸ್ಥೆ ರಕ್ಷಣೆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕೆಂದರು.
ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ, ಚುನಾವಣಾಧಿಕಾರಿಗಳಾದ ಆರ್.ಚಂದ್ರಯ್ಯ, ಆನಂದ್, ರಮೇಶ್, ಮಹೇಂದ್ರಕುಮಾರ್, ವಿವೇಕಾನಂದ, ಕೆ.ತಿಮ್ಮಪ್ಪ, ಚುನಾವಣಾ ವೆಚ್ಚದ ನೋಡಲ್ ಅಧಿಕಾರಿ ಮಧು, ಎಂಸಿಎಂಸಿ ನೋಡಲ್ ಅಧಿಕಾರಿ ಗಾಯತ್ರಿ ಇದ್ದರು.