ನವದೆಹಲಿ: ಇಂದು 80ನೇ ವಸಂತಕ್ಕೆ ಕಾಲಿಟ್ಟಿರುವ ಗಾನಗಂಧರ್ವ ಕೆ.ಜೆ.ಯೇಸುದಾಸ್ ಅವರಿಗೆ ಎಲ್ಲೆಡೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಯೇಸುದಾಸ್ ಮೂಲತಃ ಕೇರಳದವರಾದರೂ ವಿಶ್ವವಿಖ್ಯಾತಿಯನ್ನು ಹೊಂದಿದ್ದಾರೆ. ಅದಕ್ಕೆ ಕಾರಣ ಅವರ ಸುಮಧುರ ಕಂಠ. ಕನ್ನಡದಲ್ಲೂ ಅನೇಕ ಹಾಡುಗಳನ್ನು ಹಾಡಿರುವ ಯೇಸುದಾಸ್ ಕನ್ನಡಿಗರ ಮನದಲ್ಲೂ ಮನೆ ಮಾಡಿದ್ದಾರೆ.
ಸುಮಾರು 25 ಸಾವಿರ ಸಿನಿಮಾ ಹಾಡುಗಳು, ಕರ್ನಾಟಕ ಸಂಗೀತ ಭಜನ ಹಾಗೂ ಭಕ್ತಿಗೀತೆಗಳು ಸೇರಿದಂತೆ ವಿವಿಧ ಬಗೆಯ 80 ಸಾವಿರ ಹಾಡುಗಳನ್ನು ಯೇಸುದಾಸ್ ಹಾಡಿದ್ದಾರೆ. ಬಹುತೇಕ ಭಾರತೀಯ ಎಲ್ಲ ಭಾಷೆಗಳಲ್ಲಿಯೂ ಗಾನ ಗಂಧರ್ವ ತಮ್ಮ ಸುಮಧುರ ಕಂಠವನ್ನು ಪರಿಚಯಿಸಿದ್ದಾರೆ.
ವಿದೇಶಿ ಭಾಷೆಯಲ್ಲಿಯೂ ಮೋಡಿ
ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ, ಬೆಂಗಾಳಿ ಮತ್ತು ಒಡಿಯಾದಂತೆ ಭಾರತೀಯ ಭಾಷೆಗಳನ್ನು ಹೊರತುಪಡಿಸಿದರೆ, ಅರೇಬಿಕ್, ಇಂಗ್ಲಿಷ್, ಲ್ಯಾಟಿನ್ ಮತ್ತು ರಷಿಯನ್ ಭಾಷೆಗಳಲ್ಲಿಯೂ ತಮ್ಮ 6 ದಶಕಗಳ ಸಂಗೀತ ಜರ್ನಿಯಲ್ಲಿ ಧ್ವನಿ ನೀಡಿದ್ದಾರೆ.
ಇಂದಿಗೂ ಅಯ್ಯಪ್ಪ ಭಕ್ತರಿಗೆ ಫೇವರಿಟ್ ಆಗಿರುವ “ಹರಿವರಾಸನಂ” ಸೇರಿ
ಯೇಸುದಾಸ್ ಅಯ್ಯಪ್ಪಸ್ವಾಮಿ ಕುರಿತು ಸಾಕಷ್ಟು ಭಕ್ತಿಗೀತೆಗಳನ್ನು ಹಾಡಿದ್ದಾರೆ. ಅದರಲ್ಲಿ ಹರಿವರಾಸನಂ ಗೀತೆ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು, ಇಂದಿಗೂ ಈ ಹಾಡನ್ನು ಅಯ್ಯಪ್ಪ ಭಕ್ತರು ಸದಾ ಗುನುಗುತ್ತಿರುತ್ತಾರೆ.
ಕನ್ನಡದಲ್ಲಿ ಸಾಕಷ್ಟು ಹಾಡುಗಳುನ್ನು ಹಾಡಿರುವ ದಿಗ್ಗಜ ಗಾಯಕ
ಯೇಸುದಾಸ್ ಅವರಿಗೆ ಕನ್ನಡ ಚಿತ್ರರಂಗಕ್ಕೂ ಸಾಕಷ್ಟು ನಂಟಿದೆ. ವಿಷ್ಣುವರ್ಧನ್, ರವಿಚಂದ್ರನ್ ಹಾಗೂ ಅಂಬರೀಷ್ ಸೇರಿದಂತೆ ಅನೇಕರ ಚಿತ್ರಕ್ಕೆ ಯೇಸುದಾಸ್ ಧ್ವನಿಗೂಡಿಸಿದ್ದಾರೆ. ವಿಷ್ಣುವರ್ಧನ್ ಅವರ “ಮಲಯ ಮಾರುತ” ಚಿತ್ರದ ಎಲ್ಲ ಹಾಡುಗಳಿಗೂ ಯೇಸುದಾಸ್ ಧ್ವನಿ ನೀಡಿದ್ದಾರೆ. ರವಿಚಂದ್ರನ್ ಅವರ “ಸೋನೆ ಸೋನೆ”, “ಬಂಗಾರದಿಂದ ಬಣ್ಣಾನ ತಂದ” ಹಾಗೂ ಅಂಬರೀಷ್ ಅವರ “ಅಂದವೋ ಅಂದವೋ ಕನ್ನಡ ನಾಡು” ಹಾಡುಗಳು ಇಂದಿಗೂ ಸಂಗೀತ ಪ್ರಿಯರ ಫೇವರಿಟ್ ಆಗಿದೆ. ಇದನ್ನು ಹೊರತುಪಡಿಸಿ ಅನೇಕ ಭಕ್ತಿಗೀತೆಗಳನ್ನು ಕನ್ನಡದಲ್ಲಿಯೂ ಹಾಡಿದ್ದಾರೆ. ತಮ್ಮ ಸುಮಧುರ ಕಂಠದಿಂದ ಇಷ್ಟು ಕಾಲ ರಂಜಿಸಿರುವ ಯೇಸುದಾಸ್ ಮತ್ತಷ್ಟು ಕಾಲ ನಮ್ಮನ್ನು ರಂಜಿಸಲಿ ಹಾಗೂ ಅವರಿಗೆ ಒಳ್ಳೆಯ ಆಯುರ್ ಆರೋಗ್ಯ ಲಭಿಸಲಿ ಎಂದು ಪಾರ್ಥೀಸೋಣ. (ಏಜೆನ್ಸೀಸ್)