More

    ಸಮಾಜಕ್ಕಾಗಿ ಜೀವನ ಮುಡುಪಿಟ್ಟಿದ್ದ ಲಿಂ. ಶಿವಬಸವ ಶ್ರೀ

    ಹಾವೇರಿ: ಅರಿವಿನ ಜ್ಯೋತಿ, ಅನುಭಾವದ ಬುತ್ತಿ ಹಾಗೂ ಸುಜ್ಞಾನದ ಬೆಳಕನ್ನು ಹೊಂದಿದ ಸಂತ ಪರಂಪರೆಯ ಈ ನಾಡಿನಲ್ಲಿ ಹಾವೇರಿ ಹುಕ್ಕೇರಿಮಠದ ಲಿಂ. ಶಿವಬಸವ ಸ್ವಾಮೀಜಿ ಅಗ್ರಗಣ್ಯರಾಗಿದ್ದಾರೆ. ಅವರ ಸ್ಮರಣೆಯಿಂದ ನಮ್ಮಲ್ಲಿ ಅವ್ಯಕ್ತ ಚೇತನ ಸೃಷ್ಟಿಯಾಗುತ್ತದೆ ಎಂದು ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ನಗರದ ಹುಕ್ಕೇರಿ ಮಠದ ಲಿಂ. ಶಿವಬಸವ ಸ್ವಾಮೀಜಿಯವರ 75ನೇ ಹಾಗೂ ಲಿಂ. ಶಿವಲಿಂಗ ಶ್ರೀಗಳ 12ನೇ ಪುಣ್ಯ ಸ್ಮರಣೋತ್ಸವದ ನಿಮಿತ್ತ ಹಮ್ಮಿಕೊಂಡಿರುವ ನಮ್ಮೂರು ಜಾತ್ರೆಯ ಶಿವಬಸವ ಜ್ಯೋತಿ ಬರಮಾಡಿಕೊಳ್ಳುವ ಕಾರ್ಯಕ್ರಮ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಸಮ್ಮುಖ ವಹಿಸಿದ್ದ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಶಿವಬಸವ ಶ್ರೀಗಳು ಹುಟ್ಟಿದ ಸಪ್ತಸಾಗರದಿಂದ ಹೊರಟ ಜ್ಯೋತಿಯು ಭಕ್ತಿಸಾಗರದ ಹಾವೇರಿಗೆ ಬಂದಿದೆ. ಅದು ಕೇವಲ ಜ್ಯೋತಿಯಲ್ಲ, ಸಂಸ್ಕೃತಿ ಸಂಸ್ಕಾರದ ಪರಂಜ್ಯೋತಿಯಾಗಿದೆ. ಶಿವಬಸವ ಶ್ರೀಗಳಂತಹ ಪುಣ್ಯ ಪುರುಷರ ಸ್ಮರಣೆಯು ಸಮಾಜಕ್ಕೆ ಅವರು ನೀಡಿದ ಕೊಡುಗೆಗಳ ಸ್ಮರಣೆಯೂ ಆಗಿದೆ ಎಂದರು.

    ಬಳೂಟಗಿಯ ಕೈವಲ್ಯಾಶ್ರಮದ ಶಿವಕುಮಾರ ದೇವರು ಮಾತನಾಡಿ, ನಮಗೆ ನಮ್ಮ ಮನೆತನದ ಹಿಂದಿನ ತಲೆಮಾರುಗಳ ಹೆಸರುಗಳು ಬಹುತೇಕ ಗೊತ್ತಿರುವುದಿಲ್ಲ. ಆದರೆ, ನೂರಾರು ವರ್ಷಗಳ ಹಿಂದಿನ ಸಂತ ಮಹಾತ್ಮರ, ಶಿವಯೋಗಿಗಳ ಹೆಸರು ಗೊತ್ತಿರುತ್ತದೆ. ಏಕೆಂದರೆ ನಮ್ಮವರು ತಮಗಾಗಿ ಬದುಕಿದ್ದರೆ, ಮಹಾತ್ಮರು ಸಮಾಜಕ್ಕಾಗಿ ಬದುಕಿದವರು. ಅಂತಹ ಮಹಾತ್ಮರಲ್ಲಿ ತಮ್ಮ ಜೀವನವನ್ನೇ ಶಿವಯೋಗ ಮಂದಿರಕ್ಕೆ ಮುಡಿಪಾಗಿಟ್ಟವರು ಲಿಂ. ಶಿವಬಸವ ಸ್ವಾಮೀಜಿ ಎಂದರು.

    ಸಮಾರಂಭದಲ್ಲಿ ನಿಶಾಂತ ಬಳಿಗಾರ ಕುಂಚ ಕಾವ್ಯ ಕಲೆ ಪ್ರದರ್ಶಿಸಿದರು. ಇಮಾಮ್ ಹುಸೇನ ಮತ್ತು ತಂಡದವರು ಜಾನಪದ ತತ್ವಪದ ಪ್ರಸ್ತುತಪಡಿಸಿದರು.

    ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಾವನೂರಿನ ಶಿವಕುಮಾರ ಸ್ವಾಮೀಜಿ, ಗಡಹಿಂಗ್ಲಜದ ವೀರಬಸವ ಸ್ವಾಮೀಜಿ, ಮಾದನಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಕಡೆನಂದಿಹಳ್ಳಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಹುಣಶ್ಯಾಳದ ಆನಂದ ದೇವರು ಮತ್ತಿತರರು ಉಪಸ್ಥಿತರಿದ್ದರು.

    ಆಕಾಶವಾಣಿ ಕಲಾವಿದ ಶಿವಕುಮಾರ ಹಡಗಲಿ ಪ್ರಾರ್ಥಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು. ಕೆ.ಆರ್. ನಾಶೀಪುರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts