ಬೆಂಗಳೂರು: ಕಾವೇರಿ ತೀಥ೯ಕ್ಷೇತ್ರ ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟದ ಸಾಲು ಕುಸಿದು ನಾಪತ್ತೆಯಾಗಿರುವ ಕ್ಷೇತ್ರದ ಪ್ರಧಾನ ಅಚ೯ಕ ಟಿ.ಎಸ್.ನಾರಾಯಣಾಚರ್ ಆಗರ್ಭ ಶ್ರೀಮಂತರು ಎಂಬ ಮಾಹಿತಿಯನ್ನು ಅವರ ಆಪ್ತರು ಹೊರಹಾಕಿದ್ದಾರೆ. ಆ ಮೂಲಕ ನಾರಾಯಾಣಾಚಾರ್ ಮನೆಯಲ್ಲಿ ಲಕ್ಷಾಂತರ ರೂ. ನಗದು, ಚಿನ್ನಾಭರಣ ಇತ್ತೇ? ಅವುಗಳ ಜತೆಯಲ್ಲಿ ಅವರ ಕುಂಟುಂಬವೂ ಭೂಸಮಾಧಿ ಆಗಿರುವ ಶಂಕೆ ವ್ಯಕ್ತವಾಗಿದೆ.
ಕಾಫಿ ಎಸ್ಟೇಟ್ ಹೊಂದಿರುವ ನಾರಾಯಣಾಚಾರ್ಗೆ ಬೆಂಗಳೂರಿನಲ್ಲಿ ಸೈಟು, ಮನೆ ಇದೆ. ಭಾಗಮಂಡಲದಲ್ಲಿ 40 ಎಕರೆ ಜಮೀನು, ಇಲ್ಲಿನ ಜೂನಿಯರ್ ಕಾಲೇಜು ಬಳಿ 12 ಎಕರೆ ಕೃಷಿ ಭೂಮಿ, ರಸ್ತೆ ಪಕ್ಕ 7 ಎಕರೆ ಜಮೀನನ್ನು ಹೊಂದಿದ್ದಾರೆ ಎಂದು ನಾರಾಯಣಾಚಾರ್ರ ಆಪ್ತರು ಮಾಹಿತಿ ನೀಡಿದ್ದಾರೆ. ಅಲ್ಲದೆ ಮಂಗಳೂರಿನಲ್ಲೂ ಪ್ಲ್ಯಾಟ್ ಹೊಂದಿದ್ದರು ಎಂದು ತಿಳಿಸಿದ್ದಾರೆ. ಈ ಮೂಲಕ ಅರ್ಚಕರಿಗೆ ಅಪಾರ ಪ್ರಮಾಣದ ಆಸ್ತಿ ಇರೋದು ಗೊತ್ತಾಗುತ್ತಿದೆ.
ಇದನ್ನೂ ಓದಿರಿ ಅರ್ಚಕರ ಭೂಸಮಾಧಿ ಸ್ಥಳದಲ್ಲಿ ಸಿಕ್ಕಿದೆ ‘ಸಮಾಧಿ ನಿರ್ಣಯ’ ಪುಸ್ತಕ! ಉತ್ತರ ಸಿಗದ ಮರಣ ರಹಸ್ಯ…
ಈ ಹಿಂದೆ ನಾರಾಯಣಾಚಾರ್ ಅವರು ಫಾರಿನ್ಗೆ ಹೋಗುವ ಸಂದರ್ಭದಲ್ಲಿ ಬ್ಯಾಂಕ್ ಲಾಕರ್ನಲ್ಲಿ ಕೆಲ ಆಭರಣಗಳನ್ನು ಇಟ್ಟಿದ್ದರು. ವಾಪಸ್ ಬಂದ ಬಳಿಕ ಚಿನ್ನಾಭರಣಗಳನ್ನು ಮನೆಯಲ್ಲಿ ತಂದು ಇಟ್ಟುಕೊಂಡಿದ್ದರು. ಖಾಸಗಿಯಾಗಿ ಅವರಿಗೆ ಎಷ್ಟು ಆಸ್ತಿ-ಸಂಪತ್ತು ಇತ್ತು ಎಂಬುದನ್ನು ನನಗೆ ಗೊತ್ತಿರುವಷ್ಟು ಹೇಳಿದ್ದೇನೆ. ಆದರೆ ಇಂತಿಷ್ಟೇ ಇತ್ತು ಎಂಬ ಖಚಿತ ಮಾಹಿತಿ ನನಗೆ ಗೊತ್ತಿಲ್ಲ ಎಂದು ಅವರ ಆಪ್ತ ಸತೀಶ್ ಕುಮಾರ್ ತಿಳಿಸಿದ್ದಾರೆ.
ನಾರಾಯಣಾಚಾರ್ಗೆ ಓರ್ವ ಮಗ, ಇಬ್ಬರು ಹೆಣ್ಣು ಮಕ್ಕಳು. ಮಗ 20 ವರ್ಷದ ಹಿಂದೆಯೇ ಕಾಲವಾಗಿದ್ದಾರೆ. ಟೇಬಲ್ ಟೆನ್ನಿಸ್ ಆಟಗಾರನಾಗಿದ್ದ ಮಗನಿಗೆ ಸ್ಪೋರ್ಟ್ಸ್ ಕೋಟಾದಡಿ ಬೆಂಗಳೂರಿನಲ್ಲಿ ಒಂದು ಸೈಟ್ ನೀಡಲಾಗಿತ್ತು. ಆ ಸೈಟ್ನಲ್ಲೇ ಮನೆ ನಿರ್ಮಾಣ ಮಾಡಲಾಗಿದೆ. ಹೆಣ್ಣುಮಕ್ಕಳಾದ ಶಾರದಾ ಆಚಾರ್ ಮತ್ತು ನಮಿತಾ ಆಚಾರ್ ಇಬ್ಬರೂ ಅಂತರ್ ಧರ್ಮೀಯರನ್ನ ಮದುವೆಯಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಮಗಳ ಮನೆಗೆ ನಾರಾಯಣಾಚಾರ್ ಹೋಗಿಬಂದಿದ್ದರು. ಮಡಿಕೇರಿ ಸುತ್ತಮುತ್ತ ಅಪಾರ ಆಸ್ತಿ ಹೋಂದಿರುವ ಅರ್ಚಕರಿಗೆ ಕೇರಳ-ಕರ್ನಾಟಕ ಗಡಿಯಲ್ಲಿ ಮತ್ತೊಬ್ಬರ ಪಾಲುದಾರಿಕೆಯಲ್ಲಿ 80 ಎಕರೆ ಕಾಫಿ ತೋಟ ಇರುವ ಬಗ್ಗೆ ಆಪ್ತ ಮೂಲಗಳಿಂದ ಅಧಿಕೃತ ಮಾಹಿತಿ ಸಿಕ್ಕಿದೆ. ಮನೆಯಲ್ಲಿ 7 ಕ್ವಿಂಟಾಲ್ ಏಲಕ್ಕಿ, 30 ಕ್ಚಿಂಟಾಲ್ ಕರಿಮೆಣಸು ಇತ್ತು. ಅದೆಲ್ಲವೂ ಭೂಸಮಾಧಿಯಾಗಿದೆ.
ಆ.5ರಂದು ಸಂಭವಿಸಿದ ಭೂಕುಸಿತಕ್ಕೆ ನಾರಾಯಣಾಚಾರ್ ಮನೆ ಮತ್ತು ಅವರ ಸಂಬಂಧಿಕರ ಮನೆ ನಾಮಾವೇಶಗೊಂಡಿದೆ. ಅಲ್ಲದೆ ಅಲ್ಲಿ ವಾಸವಿದ್ದ ಅರ್ಚಕರ ಕುಟುಂಬಸ್ಥರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ನಾರಾಯಣಾಚಾರ್ರ ಹಿರಿಯ ಸಹೋದರ ಆನಂದತೀರ್ಥರ ಶವ, ಅವರ ಮನೆಯಲ್ಲಿದ್ದ ಅಪಾರ ಪ್ರಮಾಣದ ಏಲಕ್ಕಿ, ಕಾಳುಮೆಣಸು ತುಂಬಿದ್ದ ಚೀಲಗಳೂ ಸಿಕ್ಕಿವೆ. ಅಲ್ಲದೆ ‘ಸಮಾಧಿ ನಿರ್ಣಯ’ ಪುಸ್ತಕವೂ ಸಿಕ್ಕಿತ್ತು.