ಭುವನೇಶ್ವರ: ಮಹಿಳಾ ಸಬ್ ಇನ್ಸ್ಪೆಕ್ಟರ್ನನ್ನು ಹಿಂಬಾಲಿಸಿ ನಿಂದಿಸಿ, ಬೆದರಿಕೆ ಹಾಕಿದಲ್ಲದೆ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಒಡಿಶಾದ ಟ್ವಿನ್ ಸಿಟಿ ಕಮಿಷನರೇಟ್ ಪೊಲೀಸರು ಗುರುವಾರ (ಜ.05) ಬಂಧಿಸಿದ್ದಾರೆ.
ಬಂಧಿತರನ್ನು ಕುನಾ ಚಂದ್ರ ಸಾಹು (23), ಪ್ರದೀಪ್ ಬೆಹೆರಾ (35) ಮತ್ತು ಅರವಿಂದ್ ಮಹಾಕುಡ್ (28) ಎಂದು ಗುರುತಿಸಲಾಗಿದೆ. ಎಲ್ಲ ಮೂವರು ಆರೋಪಿಗಳು ವೃತ್ತಿಯಲ್ಲಿ ಚಾಲಕರು ಎಂದು ತಿಳಿದುಬಂದಿದೆ. ಆರೋಪಿಗಳ ಬಳಿಯಿಂದ ಎಸ್ಯುವಿ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಹಿಳಾ ಎಸ್ಐ ಸುಭಾಶ್ರೀ ನಾಯಕ್ ಅವರು ಒಡಿಶಾ ರಾಜಧಾನಿ ಭುವನೇಶ್ವರದ ಸಹೀದ್ ನಗರ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಐಪಿಸಿ ಸೆಕ್ಷನ್ 341, 294, 506 ಮತ್ತು 34 ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜನವರಿ 2ರಂದು ಘಟನೆ ನಡೆದಿದೆ. ರಾತ್ರಿ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಸುಭಾಶ್ರೀ ಮೇಲೆ ಮೂವರು ಗೂಂಡಾಗಳು ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾರೆ.
ಇನ್ನೋವಾದಲ್ಲಿ ಬಂದ ದುಷ್ಕರ್ಮಿಗಳು ಮಹಿಳಾ ಎಸ್ಐ ಸುಭಾಶ್ರೀ ನಾಯಕ್ (36) ಅವರನ್ನು ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಘಟನೆ ಆಚಾರ್ಯ ವಿಹಾರ್ ಪ್ರದೇಶದ ಸೈನ್ಸ್ ಪಾರ್ಕ್ ಬಳಿ ಜನವರಿ 2 ರಂದು ಬೆಳಗಿನ ಜಾವ 1:30 ರ ಸುಮಾರಿಗೆ ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಸಂಭವಿಸಿದೆ.
ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಸುಭಾಶ್ರೀ ಕೂಡ ಕಾರನ್ನು ವೇಗವಾಗಿ ಓಡಿಸಿಕೊಂಡು ಪೊಲೀಸ್ ಮೀಸಲು ಮೈದಾನಕ್ಕೆ ಪ್ರವೇಶಿಸಿ, ಪ್ರಾಣ ಉಳಿಸಿಕೊಂಡಿದ್ದಾರೆ. ಪಾನಮತ್ತ ಸ್ಥಿತಿಯಲ್ಲಿದ್ದ ದುಷ್ಕರ್ಮಿಗಳು ಸುಭಾಶ್ರೀ ಅವರನ್ನು ಹಿಂಬಾಲಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಪ್ರಾಣಭಯದಿಂದ ಆಕೆ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಮೀಸಲು ಮೈದಾನದಲ್ಲಿದ್ದ ಕೆಲವು ಪೊಲೀಸ್ ಸಿಬ್ಬಂದಿ ಆಕೆಯ ಸಹಾಯಕ್ಕೆ ಧಾವಿಸಿದರು. ಬೇರೆ ಪೊಲೀಸ್ ಅಧಿಕಾರಿಗಳನ್ನು ನೋಡುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಘಟನೆ ಸಂಬಂಧ ಸುಭಾಶ್ರೀ ಅವರು ಸಹೀದ್ ನಗರ ಪೊಲೀಸರಿಗೆ ಲಿಖಿತ ದೂರು ನೀಡಿದ ನಂತರ ಪ್ರಕರಣ ಬಯಲಿಗೆ ಬಂದಿದೆ. ಈ ಘಟನೆ ಇಡೀ ಒಡಿಶಾವನ್ನೇ ಬೆಚ್ಚಿ ಬೀಳಿಸಿದೆ. ಪೊಲೀಸರಿಗೆ ಹೀಗಾದರೆ ಜನ ಸಾಮಾನ್ಯರ ಗತಿ ಏನು? ರಾಜ್ಯದಲ್ಲಿ ಕಾನೂನು ಸುಸ್ಯವಸ್ಥೆ ಇಷ್ಟರ ಮಟ್ಟಿಗೆ ಹದಗೆಟ್ಟಿದೆಯಾ? ಎಂಬ ಪ್ರಶ್ನೆಗಳು ಚರ್ಚೆಯಾಗುತ್ತಿವೆ. (ಏಜೆನ್ಸೀಸ್)
ಗಂಡನನ್ನು ಬೆದರಿಸಲು ಹೋಗಿ ಗರ್ಭಿಣಿಯ ಎಡವಟ್ಟು: ಹೊಟ್ಟೆಯಲ್ಲೇ ಮಗು ಸಾವು, ಗರ್ಭಿಣಿ ಸ್ಥಿತಿ ಗಂಭೀರ
ಹತ್ತರ ವಯಸ್ಸಲ್ಲೇ ಅತ್ಯಾಚಾರ ಸಂತ್ರಸ್ತೆ, ಒಂದು ಕಾಲದ ಭಿಕ್ಷುಕಿ; ಈಗ ಅಂತಾರಾಷ್ಟ್ರೀಯ ಬ್ಯೂಟಿಕ್ವೀನ್!
PSI ಹುದ್ದೆ ನೇಮಕಾತಿಯಲ್ಲಿ ಅಕ್ರಮ: ದಿವ್ಯಾ ಹಾಗರಗಿ ಸೇರಿ 26 ಮಂದಿಗೆ ಜಾಮೀನು