ಹುಬ್ಬಳ್ಳಿ : ಮುಂಬರುವ ಲೋಕಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪರವಾಗಿ ಇರುತ್ತದೆ. 2024ಕ್ಕೆ ಮೋದಿ ಸರ್ಕಾರ ದೇಶದಲ್ಲಿ ಇರುವುದಿಲ್ಲ ಎಂದು ಕಾರ್ವಿುಕ ಸಚಿವ ಸಂತೋಷ ಲಾಡ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಲೆಕ್ಕಾಚಾರ ಕಾಂಗ್ರೆಸ್ನವರದ್ದು ನಿಜವಾಗುತ್ತದೆಯೋ ಅಥವಾ ಬಿಜೆಪಿಯವರದ್ದೋ ಎಂಬ ಸತ್ಯ ಫಲಿತಾಂಶದ ನಂತರ ಹೊರಬೀಳಲಿದೆ ಎಂದರು.
ಕಾಂಗ್ರೆಸ್ನ ಸಿದ್ಧಾಂತ ಒಪ್ಪಿ, ಅನೇಕ ಬಿಜೆಪಿ ಮುಖಂಡರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಅವರೆಲ್ಲ ಬಿಜೆಪಿ ಬಿಡಲು ಕಾರಣ ಏನೆಂಬುದನ್ನು ಅವರನ್ನೇ ಕೇಳುವಂತೆ ಮಾಧ್ಯಮದವರಿಗೆ ಹೇಳಿದರು.
ಲೋಕಸಭೆ ಚುನಾವಣೆ ಸಿದ್ಧತೆ ತುರುಸಿನಿಂದ ನಡೆದಿದೆ. ಕಾಂಗ್ರೆಸ್ ಹೈಕಮಾಂಡ್ ಲೋಕಸಭೆ ಚುನಾವಣೆಗಾಗಿ ಸರ್ವೆ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಕರ್ಮಕಾಂಡವನ್ನು ಜನರಿಗೆ ಮುಟ್ಟಿಸುತ್ತೇವೆ ಎಂದು ಹೇಳಿದರು.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕಾಂಗ್ರೆಸ್ ಚುನಾವಣೆಗೆ ನೀಡುವ ಪಾರ್ಟಿಪಂಡ್ 700 ಕೋಟಿ ರೂ.ನೂ ದಾಟಿಲ್ಲ. ಆದರೆ, ಬಿಜೆಪಿಯಿಂದ 8,500 ಕೋಟಿ ರೂ. ಪಾರ್ಟಿಫಂಡ್ ಹರಿದುಬರುತ್ತಿದೆ. ಶ್ರೀಮಂತ ಪಕ್ಷ ಯಾರದ್ದು ಎಂಬುದು ಜನರಿಗೆ ಗೊತ್ತಿದೆ ಎಂದರು.
ನಾನು ಐಟಿ ರಿಪೋರ್ಟ್ ಓದಿದ್ದೇನೆ. ದಾಳಿಯಲ್ಲಿ ಎಲ್ಲಿಯೂ ಕಾಂಗ್ರೆಸ್ ನಾಯಕರು ಅಂತ ಉಲ್ಲೇಖಿಸಿಲ್ಲ. ಇಷ್ಟು ವರ್ಷದಿಂದ ಬಿಜೆಪಿಯವರೇ ತನಿಖಾ ಸಂಸ್ಥೆಗಳನ್ನು ಜೇಬಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಯಾವುದೇ ಅಸಮಾಧಾನ ಇಲ್ಲ. ಯಾವುದೇ ಬಣಗಳಾಗಲಿ, ಭಿನ್ನಮತವಾಗಲಿ ಇಲ್ಲ ಎಂದು ಹೇಳಿದರು.