ತಾಳಗುಪ್ಪ: ಕುವೈತ್ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಚೂರಿಕಟ್ಟೆಯ ಹಾಶೀಮ್ ಫರೀದ್ಸಾಬ್ ಅವರ ಮೃತದೇಹ ಭಾನá-ವಾರ ಕುವೈತ್ನಿಂದ ಸ್ವಗ್ರಾಮಕ್ಕೆ ಮರಳಿದ್ದು ಮುಸ್ಲಿಂ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಎರಡು ವರ್ಷದ ಹಿಂದೆ ಉದ್ಯೋಗ ಅರಸಿ ಕುವೈತ್ಗೆ ತೆರಳಿದ್ದ ಚೂರಿಕಟ್ಟೆಯ ಗುಜರಿ ವ್ಯಾಪಾರಿ ಫರೀದ್ ಸಾಬ್ ಅವರ ಏಕೈಕ ಪುತ್ರ ಹಾಶೀಮ್ ಕುವೈತ್ನ ಮಹಬೂಲದ ಆರ್ಡರ್ ಸರ್ವಿಸ್ ಫಾರ್ ಲಾಜಿಸ್ಟಿಕ್ ಕಂಪನಿಯಲ್ಲಿ ಬೈಕ್ ಡ್ರೖೆವರ್ ಆಗಿ ಕೆಲಸ ಮಾಡುತ್ತಿದ್ದನು. 2020ರ ಡಿಸೆಂಬರ್ 25ರಂದು ಆತನ ಮೃತದೇಹ ಸಮುದ್ರತಟದಲ್ಲಿ ಪತ್ತೆಯಾಗಿತ್ತು. ಡಿ.27ರಂದು ಕಂಪನಿ ಅಧಿಕಾರಿಗಳು ಹಾಶೀಮ್ ಸಮುದ್ರದಲ್ಲಿ ಈಜುವಾಗ ಆಕಸ್ಮಿಕವಾಗಿ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದರು. ಆದರೆ ಕುವೈತ್ನಲ್ಲಿರುವ ಕುಟುಂಬ ಮಿತ್ರರು ಅವನು ವಾಸ್ತವ್ಯವಿದ್ದ ಕೊಠಡಿಯಲ್ಲಿ ಸಿಕ್ಕ ರಕ್ತಸಿಕ್ತ ಬಟ್ಟೆಗಳನ್ನು ಕಂಡು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಕುಟುಂಬದವರು ವಿವಿಧ ಇಲಾಖೆ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರಗೆ ದೂರು ಸಲ್ಲಿಸಿ ತನಿಖೆಗೆ ಆಗ್ರಹಿಸಿದ್ದರು. ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮೃತ ದೇಹವನ್ನು ಊರಿಗೆ ಕಳಿಸಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೃತಪಟ್ಟ 23 ದಿನಗಳ ನಂತರ ಹಾಶೀಮ್ ಮೃತ ದೇಹ ಗ್ರಾಮಕ್ಕೆ ತಲುಪಿದೆ. ಹೊರನಾಡಿನಲ್ಲಿ ದುಡಿದು ತಂದೆ-ತಾಯಿಗೆ ನೆಮ್ಮದಿ ಬದುಕು ಕಲ್ಪಿಸಬೇಕು. ಮನೆ ಕಟ್ಟಬೇಕು ಎಂದು ಕುವೈತ್ಗೆ ತೆರಳಿದ್ದ ಹಾಶೀಮ್ ಫೆಬ್ರವರಿಯಲ್ಲಿ ಊರಿಗೆ ಮರಳುವುದಾಗಿ ತಿಳಿಸಿದ್ದನು.