ಚಿಕ್ಕಮಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ, ವೈಚಾರಿಕ ಭಾವನೆ ಬಿತ್ತಿದ ಮಹಾಚೇತನ ಕುವೆಂಪು ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಎಸ್.ಬಾಲಾಜಿ ಅಭಿಪ್ರಾಯಪಟ್ಟರು.
ಲಾಲ್ಬಹದೂರ್ ಶಾಸ್ತ್ರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡಿಗರನ್ನು ಸಾಹಿತ್ಯದಲೆಗಳ ಮೇಲೆ ತೇಲುವಂತೆ ಮಾಡಿದ ಶಬ್ದ ಮಾಂತ್ರಿಕ. ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂಬ ನಾಡಗೀತೆಯ ಪದಪುಂಜಗಳಿಂದ ಕನ್ನಡ ಮಾತೆಗೆ ಶಬ್ದಾರ್ಚನೆ ಮಾಡಿದ ಸಹ್ಯಾದ್ರಿ ಸಾಲ ಕವಿಕುಲೋತ್ತಮ ಎಂದು ಬಣ್ಣಿಸಿದರು.
ಉಪನ್ಯಾಸಕ ಚಂದ್ರಮೌಳಿ ಮಾತನಾಡಿ, ಯುಗದ ಕವಿ ಕುವೆಂಪು ಕನ್ನಡ ಸಾರಸ್ವತ ಲೋಕಕ್ಕೆ ವಿಶ್ವಮಾನವ ಸಂದೇಶ ನೀಡಿದ್ದಾರೆ. ಈ ಮೂಲಕ ಜಗತ್ತಿಗೆ ಸಮಷ್ಠಿಯ ಪ್ರಜ್ಞೆಯ ವಿಶ್ವಪಥಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಕುವೆಂಪು ಕನ್ನಡ ನಾಡಿನ ಹೆಮ್ಮೆಯ ರಸಕವಿ. ಋಷಿಕವಿ, ರಾಷ್ಟ್ರಕವಿ. ಕನ್ನಡದ ಹಿರಿಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿಹಿಡಿದ ಮಹಾನ್ ಚೇತನ ಎಂದರು.
ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲೂಕು ಅಧ್ಯಕ್ಷ ಬಿ.ಎಚ್.ಸೋಮಶೇಖರ್, ಆಶಾ, ವೀಣಾ ಅರವಿಂದ್, ಕೆ.ಪಿ.ನವೀನ್, ವೀಣಾ ಮಲ್ಲಿಕಾರ್ಜುನ್, ಪೃಥ್ವಿ ಸೂರಿ, ಜಿಲ್ಲಾ ಕಜಾಪ ಅಧ್ಯಕ್ಷ ಓಣಿತೋಟ ರತ್ನಾಕರ್, ರೋಷನ್ ಇತರರಿದ್ದರು.