ಕುಷ್ಟಗಿ: ಪಟ್ಟಣದ ತಹಸಿಲ್ ಕಚೇರಿಯ ವಿವಿಧ ವಿಭಾಗಗಳಿಗೆ ಜಿಲ್ಲಾಧಿಕಾರಿ ಸುಂದರೇಶ ಬಾಬು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ನಂತರ ನಿಡಶೇಸಿ ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಮನೆ ಮಾಲೀಕರಿಗೆ ಪರಿಹಾರ ಚೆಕ್ ವಿತರಿಸಿದರು. ತಾಲೂಕಿನ ವಿವಿಧೆಡೆ ಹಾನಿಗೀಡಾದ 143 ಮನೆಗಳ ಮಾಲೀಕರಿಗೆ ನಷ್ಟ ಪ್ರಮಾಣ ಆಧರಿಸಿ ಮೂರು ಹಂತದಲ್ಲಿ ಪರಿಹಾರ ವಿತರಿಸಲಾಗುತ್ತಿದೆ ಎಂದು ಡಿಸಿ ಸುಂದರೇಶ ಮಾಹಿತಿ ನೀಡಿದರು. ನಿಡಶೇಸಿ ಗ್ರಾಮದ ಚನ್ನಪ್ಪ ಸೋಬಾನಿ ಎನ್ನುವವರ ಮನೆಗೆ ಭೇಟಿ ನಿಡಿದ ಡಿಸಿ ಮೊದಲ ಹಂತದ 95100 ರೂ. ಮೊತ್ತದ ಚೆಕ್ ವಿತರಿಸಿದರು. ತಹಸೀಲ್ದಾರ್ ಗುರುರಾಜ ಛಲವಾದಿ, ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ ಇತರರಿದ್ದರು.