ಕುಷ್ಟಗಿ: ಹನುಮಸಾಗರದ ರಾಷ್ಟ್ರೀಯ ಕ್ರೀಡಾ ಹಾಗೂ ಹವ್ಯಾಸಿ ಮಂಡಳಿಯ ಕಟ್ಟಡವನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ಸಂಘದ ಸದಸ್ಯರು ಶುಕ್ರವಾರ ತಹಸೀಲ್ದಾರ್ ಆರ್.ರಾಘವೇಂದ್ರಗೆ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಕ್ರೀಡಾ ಹಾಗೂ ಹವ್ಯಾಸಿ ಮಂಡಳಿಯನ್ನು 40 ವರ್ಷಗಳ ಹಿಂದೆ ಆರಂಭಿಸಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿ ಮಾಡಿಸಲಾಗಿತ್ತು. ಸಂಘದ ಕಟ್ಟಡ ನಿರ್ಮಾಣಕ್ಕೆ ಗ್ರಾಪಂ ನಿವೇಶನ ಒದಗಿಸಿತ್ತು. ಸರ್ಕಾರದಿಂದ ಅನುದಾನ ಪೆಡೆದು ಕಟ್ಟಡವನ್ನೂ ನಿರ್ಮಿಸಲಾಗಿತ್ತು. ಕೆಲ ವರ್ಷಗಳ ನಂತರ ಸಂಘದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಸಂಘದ ಚಟುವಟಿಕೆಗಳು ಸ್ಥಗಿತಗೊಂಡವು. ಗ್ರಾಪಂನ ಕೆಲ ಸದಸ್ಯರು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಸೇರಿಕೊಂಡು ನವಚೇತನ ಕ್ರೀಡಾ ಹಾಗೂ ಹವ್ಯಾಸಿ ಮಂಡಳಿ ಎಂದು ಹೆಸರು ಬದಲಿಸಿ ಖಾಸಗಿ ವ್ಯಕ್ತಿಯೊಬ್ಬರಿಗೆ 40ಲಕ್ಷ ರೂ.ಗಳಿಗೆ ಕಟ್ಟಡ ಮಾರಾಟ ಮಾಡಿದ್ದಾರೆ. ಇದರಲ್ಲಿ ಸಂಘದ ಕೆಲ ಸದಸ್ಯರೂ ಭಾಗಿಯಾಗಿದ್ದಾರೆ. ಸೂಕ್ತ ದಾಖಲೆ ಪರೀಶಿಲಿಸದೆ ಉಪ ನೋಂದಣಾಧಿಕಾರಿಗಳು ಆಸ್ತಿ ವರ್ಗಾವಣೆ ಮಾಡಿದ್ದಾರೆ. ಕೂಡಲೇ ರದ್ದುಗೊಳಿಸಿ ಸಂಘಕ್ಕೆ ಆಸ್ತಿ ಉಳಿಸಿಕೊಡುವಂತೆ ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಶ್ರೀನಿವಾಸ ಜಹಗೀರದಾರ್, ಗ್ರಾಪಂ ಸದಸ್ಯ ಸಿದ್ದಯ್ಯ ಬಾಳಿಹಳ್ಳಿಮಠ, ಮಾಜಿ ಸದಸ್ಯ ಶಿವಪುತ್ರಪ್ಪ, ದಲಿತ ಸಂಘರ್ಷ ಸಮಿತಿಯ ಚಂದಪ್ಪ ಕುದರಿ, ಚಂದಪ್ಪ ಗುಡಲದಿನ್ನಿ ಇತರರಿದ್ದರು.