ಕುಷ್ಟಗಿ: ಪಟ್ಟಣದ 3ನೇ ವಾರ್ಡ್ನಲ್ಲಿ ಹಾದು ಹೋಗಿರುವ ಕುರುಬನಾಳ ಹಳೇ ರಸ್ತೆ ಪಕ್ಕದ ತೆರೆದ ಚರಂಡಿಯೊಂದು ವಾಹನ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿದೆ. ನಿತ್ಯ ಒಂದಿಲ್ಲೊಂದು ವಾಹನಗಳು ಬೀಳುತ್ತಿದ್ದು, ಸಂಭವಿಸುವ ಮುನ್ನ ಪುರಸಭೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಾರ್ಡ್ ನಿವಾಸಿಗಳು ಒತ್ತಾಯಿಸಿದ್ದಾರೆ.
ತಾಲೂಕಿನ ಕುರುಬನಾಳ ಸಂಪರ್ಕ ರಸ್ತೆ ಇಕ್ಕಟ್ಟಾಗಿದ್ದು, ಇದರ ಪಕ್ಕದಲ್ಲಿನ ಚರಂಡಿ ನಿರುಪಯುಕ್ತ ಗಿಡಗಂಟೆ ಬೆಳೆದು ಕಾಣದಂತಾಗಿದೆ. ವಾಹನಗಳು ಪರಸ್ಪರ ಎದುರಾದಾಗ ಅವಘಡ ಸಂಭವಿಸುತ್ತಿವೆ. ಅನೇಕ ಬೈಕ್, ಕಾರುಗಳು ಆಳದ ಚರಂಡಿಯೊಳಗೆ ಬಿದ್ದು ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಸ್ಕೂಟಿಯೊಂದಿಗೆ ಓಡಾಡುವ ಮಹಿಳೆಯರೂ ಸಹ ವಾಹನ ಸಮೇತ ಬಿದ್ದು ಮುಜುಗರಕ್ಕೀಡಾಗಿದ್ದಾರೆ. ಈ ರಸ್ತೆಯಲ್ಲಿ ಓಡಾಡುವ ಖಾಸಗಿ ಶಾಲಾ ಬಸ್ಗಳ ಚಾಲಕರೂ ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ.
ಡೀಸೆಲ್ಗೆಂದು ಬಂಕ್ಗಳಿಗೆ ತೆರಳುತ್ತಿದ್ದ ಸಾರಿಗೆ ಬಸ್ಗಳನ್ನು ಈ ರಸ್ತೆಯಲ್ಲಿ ಓಡಿಸದಂತೆ ವಾರ್ಡ್ ನಿವಾಸಿಗಳು ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿರುವ ಉದಾಹರಣೆಯೂ ಇದೆ.
ಪುರಸಭೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ವಾರ್ಡ್ನ ಬಾಬು ಘೋರ್ಪಡೆ, ಮಹಾಂತೇಶ ಮಂಗಳೂರು, ಅಭಿನಂದನ್ ಗೋಗಿ ಇತರರು ಅಲವತ್ತುಕೊಂಡಿದ್ದಾರೆ.
ಮೂರನೇ ವಾರ್ಡ್ನ ಕುರುಬನಾಳ ರಸ್ತೆ ಪಕ್ಕದ ತೆರೆದ ಚರಂಡಿಯಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿರುವ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ವಾರ್ಡ್ಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಧರಣೇಂದ್ರಕುಮಾರ್. ಪುರಸಭೆ ಮುಖ್ಯಾಧಿಕಾರಿ, ಕುಷ್ಟಗಿ