ಕುಷ್ಟಗಿ: ಮನುಕುಲಕ್ಕೆ ಒಳಿತಾಗಲಿ ಎಂದು ಬಯಸಿದ ಯೇಸುವಿನ ಸ್ಮರಣೆಯನ್ನು ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.
ಪಟ್ಟಣದ ಆತ್ಮಭರಿತ ಸಾರ್ವತ್ರಿಕ ಎಜೆ ಸಭೆಯಲ್ಲಿ ಶನಿವಾರ ಆಯೋಜಿಸಿದ್ದ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಮಾತನಾಡಿದರು. ಸಮಾಜದಲ್ಲಿ ದುರ್ಬಲ ಹಾಗೂ ತುಳಿತಕ್ಕೊಳಗಾದವರನ್ನು ಮೇಲೆತ್ತುವ ಹಾಗೂ ನೆರವು ನೀಡುವವರಿಗೆ ಯೇಸು ಆಶೀರ್ವದಿಸುತ್ತಾನೆ ಎಂದರು.
ತಹಸೀಲ್ದಾರ್ ಎಂ.ಸಿದ್ದೇಶ ಮಾತನಾಡಿ, ಯೇಸುಕ್ರಿಸ್ತ ಮನುಕುಲುದ ದಾರಿದೀಪ. ಯೇಸುವನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಯೇಸು ನೀಡಿದ ಸಂದೇಶವನ್ನು ಎಲ್ಲರೂ ಒಪ್ಪಿಕೊಳ್ಳಬೇಕಿದೆ ಎಂದರು.
ಪಟ್ಟಣದ ಕ್ರೈಸ್ತ್ ದ ಕಿಂಗ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಾದರ್ ಸ್ಯಾಮ್ ನಲನ್, ಸಿಸ್ಟರ್ಗಳಾದ ಕಾನಿಕಾ ಮೇರಿ, ಬಾಲಮ್ಮ, ಪುಷ್ಪಾರಾಣಿ, ಮರಿಯಪ್ಪ ದೊಡ್ಡಮನಿ ಇತರರು ಇದ್ದರು.