ಕುಷ್ಟಗಿ: ಐತಿಹಾಸಿಕ ಸ್ಥಳಗಳನ್ನು ಸ್ವಂತ ಆಸ್ತಿ ಎಂಬ ರೀತಿಯಲ್ಲಿ ಕಾಳಜಿ ತೋರಬೇಕಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.
ತಾಲೂಕಿನ ಕಬ್ಬರಗಿಯಿಂದ ಕಪಿಲತೀರ್ಥ ಜಲಪಾತಕ್ಕೆ ಸಂಪರ್ಕಿಸುವ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶುಕ್ರವಾರ ಮಾತನಾಡಿದರು. ಕಪಿಲತೀರ್ಥ ಈ ಭಾಗದ ಕಿರುಜಲಪಾತವಾಗಿದೆ. ಇಂತಹ ಸ್ಥಳಗಳ ಸೌಂದರ್ಯ ಹೆಚ್ಚಿಸಲು ಅರಣ್ಯ ಇಲಾಖೆ ಅಧಿಕಾರಿಗಳು ರಸ್ತೆಯ ಅಕ್ಕಪಕ್ಕ ಹಾಗೂ ಖಾಲಿ ಪ್ರದೇಶದಲ್ಲಿ ವಿವಿಧ ಗಿಡಗಳನ್ನು ನೆಟ್ಟು ಪೋಷಿಸಬೇಕು. ದೂರದ ಊರುಗಳಿಂದ ಬರುವವರಿಗೆ ಸೌಕರ್ಯ ಕಲ್ಪಿಸುವ ಕೆಲಸ ಈ ಭಾಗದ ಜನರಿಂದಾಗಬೇಕು ಎಂದರು.
ಜಲಪಾತಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಪಡಿಸಬೇಕೆಂಬ ಬಹುದಿನದ ಬೇಡಿಕೆ ಸದ್ಯ ಈಡೇರಿದೆ. ಕಕ ಪ್ರದೇಶಾಭಿವೃದ್ಧಿ ಯೋಜನೆಯ ಎಸ್ಸಿಪಿ 2019-20ನೇ ಸಾಲಿನ ಒಂದು ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಈ ಕುರಿತು ವಿಜಯವಾಣಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಬ್ಬರಗಿ ಗ್ರಾಪಂ ಅಧ್ಯಕ್ಷೆ ಚನ್ನವ್ವ ಕಂಬಳಿ, ಆರ್ಡಿಸಿಸಿ ಉಪಾಧ್ಯಕ್ಷ ಶಿವಶಂಕರಗೌಡ ಕಡೂರು, ವಲಯ ಅರಣ್ಯಾಧಿಕಾರಿ ಅನ್ವರ್, ಪ್ರಮುಖರಾದ ಮಹಾಂತೇಶ ಅಗಸಿಮುಂದಿನ್, ಈಶಪ್ಪ ಕನ್ನೂರು, ಸಂಗಮೇಶ ಗುರಿಕಾರ, ಭೀಮಣ್ಣ ವಜ್ಜಲ್, ಪರಶುರಾಮಪ್ಪ ನಂದ್ಯಾಳ, ಮಹಾಂತೇಶ ವಜ್ಜಲ್ ಇತರರಿದ್ದರು.