ಕುಷ್ಟಗಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಗುರುವಾರ ಕೊಪ್ಪಳ ಎಸಿ ಬಸವಣ್ಣೆಪ್ಪ ಕಲಶೆಟ್ಟಿ ಭೇಟಿ ನೀಡಿ, ಚರ್ಚಿಸಿದರು.
ಕೊಪ್ಪಳ-ಕ್ಯಾದಿಗುಪ್ಪ ರಾಜ್ಯ ಹೆದ್ದಾರಿ ದುರಸ್ತಿ ಕಾರ್ಯ ಎಂಟು ತಿಂಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರೂ ಕಾಮಗಾರಿ ಮುಗಿದಿಲ್ಲ. ಕಾಮಗಾರಿ ನನೆಗುದಿಗೆ ಬೀಳಲು ಕಾರಣವೇನು? ಎಂದು ಧರಣಿ ನಿರತರು ಪ್ರಶ್ನಿಸಿದರು.
ಬಿಡುಗಡೆಯಾದ ಅನುದಾನ ಮಾಹಿತಿ ನೀಡಬೇಕು. ಭರವಸೆ ನೀಡಿದರೆ ಸಾಲದು ಕಾಮಗಾರಿ ಆರಂಭಿಸಬೇಕು. ಜತೆಗೆ ಗ್ರಾಮನ್ನು ಕಂದಾಯ ಹೋಬಳಿ ಎಂದು ಘೋಷಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಭರವಸೆ ಲಿಖಿತ ಆದೇಶ ಕೈ ಸೇರಿದ ನಂತರ ಹೋರಾಟ ಹಿಂಪಡೆಯಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.
ಎಸಿ ಬಸವಣ್ಣೆಪ್ಪ ಕಲಶೆಟ್ಟಿ ಮಾತನಾಡಿ, ಕೊಪ್ಪಳ-ಕ್ಯಾದಿಗುಪ್ಪ ರಾಜ್ಯ ಹೆದ್ದಾರಿಯ ರಸ್ತೆ ದುರಸ್ತಿ ಹಾಗೂ ಇತರ ಬೇಡಿಕೆಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ತಹಸೀಲ್ದಾರ್ ರಾಘವೇಂದ್ರರಾವ್, ಲೋಕೋಪಯೋಗಿ ಇಲಾಖೆಯ ಎಇಇ ಪ್ರಭು ಹುನಗುಂದ, ಇಂಜಿನಿಯರ್ ಭೀಮಸೇನರಾವ್ ವಜ್ರಬಂಡಿ, ಕಂದಾಯ ನಿರೀಕ್ಷಕ ಉಮೇಶಗೌಡ ಗೌಡ್ರ, ಪಿಎಸ್ಐ ಮೌನೇಶ ರಾಠೋಡ್ ಇದ್ದರು.