ಪುರಂದರ ದಾಸರ ಆರಾಧನೆ ನಿಮಿತ್ತ ಕಾರ್ಯಕ್ರಮ ಆಯೋಜನೆ
ಕುಷ್ಟಗಿ: ಪಟ್ಟಣದ ಅಡವಿರಾಯ ದೇವಸ್ಥಾನದಲ್ಲಿ ಜ.23ರಿಂದ 26ರವರೆಗೆ ಶ್ರೀ ಮಧ್ವಪುರಂದರೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಬೆಂಗಳೂರಿನ ‘ನಿನ್ನಾ ಒಲುಮೆಯಿಂದ’ ಪ್ರತಿಷ್ಠಾನಂ ಮುಖ್ಯಸ್ಥ ಮೈಸೂರು ರಾಮಚಂದ್ರಾಚಾರ್ ತಿಳಿಸಿದರು.
ಪಟ್ಟಣದ ತಿಮ್ಮಪ್ಪಯ್ಯ ದೇಸಾಯಿ ಅವರ ನಿವಾಸದಲ್ಲಿ ಶುಕ್ರವಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಪುರಂದರ ದಾಸರ ಆರಾಧನೆ ನಿಮಿತ್ತ ನಿನ್ನಾ ಒಲುಮೆಯಿಂದ ಪ್ರತಿಷ್ಠಾನಂ ಹಾಗೂ ಅಡವಿರಾಯ ಭಕ್ತ ಸಮೂಹ ಕಾರ್ಯಕ್ರಮ ಆಯೋಜಿಸಿವೆ. ರಾಜ್ಯದ ವಿವಿಧೆಡೆಯಿಂದ 10 ಶ್ರೀಗಳು, 20ವಿದ್ವಾಂಸರು ಪಾಲ್ಗೊಂಡು ಪ್ರವಚನ ನೀಡಲಿದ್ದಾರೆ. ಇದರ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಾಡಿನ ಸಂಸ್ಕೃತಿ, ದಾಸ ಸಾಹಿತ್ಯದ ಪ್ರಚಾರ ಹಾಗೂ ಜನರಲ್ಲಿ ಭಕ್ತಿ ಭಾವನೆ ಜಾಗೃತಗೊಳಿಸುವ ಉದ್ದೇಶ ಹೊಂದಲಾಗಿದೆ. ವಿದೇಶದಲ್ಲಿರುವ ಸುಮಾರು 1500 ಭಕ್ತರು ಸೇರಿ 2 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದರು.
ಬ್ರಾಹ್ಮಣ ಸಮುದಾಯದ ಪ್ರಮುಖರಾದ ತಿಮ್ಮಪ್ಪಯ್ಯ ದೇಸಾಯಿ, ಗೋಪಾಲರಾವ್ ಬಿಜಕಲ್, ಶ್ರೀನಿವಾಸ ಹಳ್ಳೂರು, ಹನುಮೇಶ ಕುಲಕರ್ಣಿ, ಜಯತೀರ್ಥ ಸೌದಿ, ಅರವಿಂದ ಕುಮಾರ ದೇಸಾಯಿ ಇತರರು ಇದ್ದರು.