ಕುರುಗೋಡು: ಸರ್ಕಾರ ಶಿಕ್ಷಣಕ್ಕೆ ಒತ್ತು ಕೊಟ್ಟು ಅಗತ್ಯ ಸೌಲಭ್ಯಗಳನ್ನು ನೀಡುತ್ತಿದೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಲು ಮುಂದಾಗಬೇಕು ಎಂದು ಬಳ್ಳಾರಿ ಡಿಡಿಪಿಯು ಟಿ.ಪಾಲಾಕ್ಷ ಹೇಳಿದರು.
ಪಟ್ಟಣದ ಬಾದನಹಟ್ಟಿ ರಸ್ತೆಯಲ್ಲಿ ಸರ್ಕಾರಿ ಪಿಯು ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಬೋಧನೆ ಮಾಡುವ ಮೂಲಕ ಉತ್ತಮ ಶಿಕ್ಷಣ ನೀಡಲು ಕಂಕಣ ಬದ್ಧರಾಗಬೇಕು. ಕಾಲೇಜ್ ಆಡಳಿತ ಮಂಡಳಿ ಉತ್ತಮ ಫಲಿತಾಂಶ ನೀಡಲು ಶ್ರಮಿಸಬೇಕು. ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ ಕೂಡ ಹೆಚ್ಚಿಸಲು ಪ್ರತಿಯೊಬ್ಬ ಉಪನ್ಯಾಸಕ ಜವಾಬ್ದಾರಿಯಾಗಿದೆ ಎಂದರು.
ಶಾಸಕ ಜೆ. ಎನ್. ಗಣೇಶ್ ಮಾತನಾಡಿ, ಅಭಿವೃದ್ಧಿ ಹೊಂದಲು ಶಿಕ್ಷಣ ಪ್ರಮುಖ ಅಸ್ತ್ರವಾಗಿದ್ದು, ಪ್ರತಿಯೊಬ್ಬರೂ ಆದ್ಯತೆ ನೀಡಬೇಕು. ತಾಲೂಕಿನ ಶಾಲಾ-ಕಾಲೇಜುಗಳಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇನೆ. ಹೊಸ ಕಾಲೇಜು ಕಟ್ಟಡಕ್ಕೆ ರಸ್ತೆ ಸಂಪರ್ಕ ಕಲ್ಪಿಸಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಕುಡಿವ ನೀರು, ವಿದ್ಯುತ್ ಸೇರಿದಂತೆ ಇತರ ಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ತಹಸೀಲ್ದಾರ್ ರಾಘವೇಂದ್ರ ರಾವ್ ಮಾತನಾಡಿದರು. ತಾಪಂ ಇಒ ಪಿ.ನಿರ್ಮಲಾ, ಪಿಎಸ್ಐ ಸುಪ್ರೀತ್ ವಿರೂಪಾಕ್ಷಪ್ಪ, ಗ್ರಾಪಂ ಅಧ್ಯಕ್ಷ ಮೆಟ್ರಿ ಸಿದ್ದಯ್ಯ, ಪಿಡಿಒ ರಾಮಲಿ, ಪ್ರಾಚಾರ್ಯ ವೇಣುಗೋಪಾಲ, ಪ್ರಮುಖರಾದ ಕರಿಬಸವ ರೆಡ್ಡಿ, ಚಾನಾಳು ಚನ್ನಬಸವ ಇತರರಿದ್ದರು.