ಕುರುಗೋಡು: ಕರೊನಾ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಭಾನುವಾರ ಪಟ್ಟಣದಲ್ಲಿ ಶ್ರೀ ದೊಡ್ಡ ಬಸವೇಶ್ವರ ರಥೋತ್ಸವ ಸಾಂಕೇತಿಕವಾಗಿ ಆಚರಿಸಲಾಯಿತು. ನಸುಕಿನ ಜಾವ 5 ಗಂಟೆಗೆ ಪೊಲೀಸ್ ಭದ್ರತೆಯಲ್ಲಿ ಕೇವಲ ಐದು ಹೆಜ್ಜೆ ಎಳೆಯಲಾಯಿತು.
ಕರೊನಾ ಎರಡನೇ ಅಲೆಯಿಂದ ಪ್ರಕರಣ ಹೆಚ್ಚುತ್ತಿರುವುದರಿಂದ ರಥೋತ್ಸವ ರದ್ದುಪಡಿಸಲಾಗಿತ್ತು. ಹೀಗಾಗಿ ಧಾರ್ಮಿಕ ದತ್ತಿ ಇಲಾಖೆಯಿಂದ ಕೇವಲ ಸಾಂಪ್ರದಾಯಿಕ ಪೂಜೆ, ಅಭಿಷೇಕ, ವಿಧಿ ವಿಧಾನಗಳನ್ನು ಮಾಡಲಾಯಿತು. ಸಂಪ್ರದಾಯ ಬಿಡಬಾರದೆಂಬ ಕಾರಣಕ್ಕೆ ರಥವನ್ನು ಕೇವಲ 5 ಹೆಜ್ಜೆಗಳಷ್ಟು ಎಳೆಯಲಾಯಿತು. ಸ್ವಾಮಿ ದರ್ಶನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ದೇವಸ್ಥಾನದ ಮುಖ್ಯ ದ್ವಾರದಲ್ಲೇ ಭಕ್ತರು ಕೈ ಮುಗಿದರು. ಸಮಯ ಏರುತ್ತಿದ್ದಂತೆ ಜಾತ್ರೆಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಯಿತು. ಬಂದವರು ನಿಂತಿದ್ದ ರಥಕ್ಕೆ ಹೂ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಮಾ.20ರಿಂದ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಅಂದಿನಿಂದ ದೊಡ್ಡಬಸವೇಶ್ವರ ಸ್ವಾಮಿ ಹಾಗೂ ನೀಲಮ್ಮ ತಾಯಿಗೆ ನಾಗಾಭರಣ, ಸಿಂಹ, ನವಿಲು, ಅಶ್ವ, ಬಿಳಿ ಬಸವ, ಗಜ ವಾಹನ ಉತ್ಸವ, ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು. ಜಾತ್ರೆ ಬರುವ ಭಕ್ತರಿಗೆ ಪುರಸಭೆಯಿಂದ ಕುಡಿವ ನೀರು, ರಸ್ತೆಗಳ ದುರಸ್ತಿ ಸೇರಿ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.